ಆದಿಚುಂಚನಗಿರಿ ಮಠದಿಂದ ಧಾರ್ಮಿಕ ವಿಧಿಗಳ ಸ್ನಾತಕೋತ್ತರ ಶಿಕ್ಷಣ
ಮೈಸೂರು : ಧಾರ್ಮಿಕ ವಿಧಿಗಳ ಬಗ್ಗೆ ಯುವಜನತೆಯನ್ನು ಜಾಗೃತಿಗೊಳಿಸಲು ಮುಂದಾಗಿರುವ ಆದಿಚುಂಚನಗಿರಿ ಸಂಸ್ಥಾನ, ಶಿಕ್ಷಣದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಅಳವಡಿಸಲು ನಿರ್ಧರಿಸಿದೆ.
ಧಾರ್ಮಿಕ ವಿಧಿಗಳ ಬಗ್ಗೆ ತಿಳಿವಳಿಕೆ ನೀಡುವ ಎರಡು ವರ್ಷಗಳ ಸ್ನಾತಕೋತ್ತರ ಪದವಿಯ ಕೋರ್ಸನ್ನು ಆದಿಚುಂಚನಗಿರಿ ಸಂಸ್ಥಾನ ಸದ್ಯದಲ್ಲೇ ಪ್ರಾರಂಭಿಸಲಿದೆ ಎಂದು ಸಂಸ್ಥಾನದ ಪೀಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದ್ದಾರೆ.
ಮೊದಲ ವರ್ಷದಲ್ಲಿ 50 ವಿದ್ಯಾರ್ಥಿಗಳಿಗೆ ಕೋರ್ಸ್ನಲ್ಲಿ ಅವಕಾಶ ಮಾಡಿಕೊಡಲಾಗುವುದು. ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳನ್ನು ಮೂರು ವರ್ಷಗಳ ಕಾಲ ಸಂಸ್ಥಾನದಲ್ಲಿಯೇ ಇರಿಸಿಕೊಂಡು ವೇತನ ನೀಡಲಾಗುವುದು ಎಂದು ಸ್ವಾಮೀಜಿ ಹೇಳಿದರು. ಅವರು, ಬುಧವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆದ ಒಕ್ಕಲಿಗ ಜಾಗೃತಿ ವೇದಿಕೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಿನಿಮಾ ನಟ ಹಾಗೂ ಸಂಸದ ಅಂಬರೀಷ್, ಮುಕ್ತ ವಿಶ್ವವಿದ್ಯಾಲಯದ ಉಪಕಪಲಪತಿ ಎನ್.ಎಸ್. ರಾಮೇಗೌಡ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)