ಮಾದಾವರ ಕೆರೆಯ ಮೀನು ತಿನ್ನಲರ್ಹವಲ್ಲ -ಪರಿಸರ ಸಚಿವ
ಬೆಂಗಳೂರು : ನಗರದ ತುಮಕೂರು ರಸ್ತೆಯಲ್ಲಿರುವ ಮಾದಾವರ ಕೆರೆಯ ನೀರು ಮಲಿನಗೊಂಡಿದ್ದು, ಅಲ್ಲಿ ಬೆಳೆಸಿದ ಮೀನುಗಳ ಮಾರಾಟ ಮಾಡಬಾರದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಹೆಚ್. ರಂಗನಾಥ್ ಸೂಚನೆ ನೀಡಿದ್ದಾರೆ.
ಅವರು ಇತ್ತೀಚೆಗೆ, ಮಾನವ ಚಾರಿಟೇಬಲ್ ಟ್ರಸ್ಟ್ ನೀಡಿದ ಮನವಿಯ ಮೇರೆಗೆ ಮಾದಾವರ ಕೆರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ಕೆರೆಯಲ್ಲಿ ಬೆಳೆದ ಮೀನು ತಿನ್ನಲು ಯೋಗ್ಯವಲ್ಲದ ಕಾರಣ ಮೀನು ಮಾರಾಟ ನಿಷೇಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೀನುಗಾರಿಕಾ ಇಲಾಖೆಗೆ ಪತ್ರ ಬರೆಯುವುದಾಗಿ ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ , ಕರ್ನಾಟಕ ಬ್ರಿವರಿಜ್ ಹಾಗೂ ಡಿಸ್ಟಿಲರೀಸ್ ಕಾರ್ಖಾನೆಯ ನೀರು ಶುದ್ಧೀಕರಣ ಘಟಕವನ್ನು ಅವರು ಪರಿಶೀಲಿಸಿದರು. ಜಿಂದಾಲ್ ಆಸ್ಪತ್ರೆಯ ಆವರಣದ ಮೇಲ್ಭಾಗದಿಂದ ಮತ್ತು ಜನವಸತಿ ಪ್ರದೇಶದಿಂದ ಹರಿದು ಬರುವ ಕಲುಷಿತ ನೀರು ಕೆರೆಯನ್ನು ಸೇರಿ, ನೀರು ಮಲಿನಗೊಳ್ಳುತ್ತದೆ ಎಂದು ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದಾಕ್ಷಾಯಿಣಿ ಸಚಿವರಿಗೆ ವಿವರಿಸಿದರು.
(ಇನ್ಫೋ ವಾರ್ತೆ)