ತೆಂಗಿನ ಮರದ ಸೇಂದಿಗೆ ಅನುಮತಿ : ಪರಿಶೀಲನೆಯಲ್ಲಿ
ಬೆಂಗಳೂರು : ಇನ್ನು ಮೂರು ವರ್ಷಗಳ ಕಾಲ ತೆಂಗಿನ ಮರದಿಂದ ಸೇಂದಿ ತೆಗೆಯಲು ರೈತರಿಗೆ ಅನುಮತಿ ನೀಡಲು ರಾಜ್ಯ ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
ತೋಟಗಾರಿಕೆ ಇಲಾಖೆ ಸಚಿವ ಅಲ್ಲಂ ವೀರಭದ್ರಪ್ಪ ಈ ವಿಷಯವನ್ನು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ತೆಂಗು ಬೆಳೆಗೆ ತಗುಲಿದ ನುಸಿರೋಗ ನಿಯಂತ್ರಿಸಲು ಮತ್ತು ರೈತರ ಹಿತ ಕಾಪಾಡುವ ದೃಷ್ಠಿಯಿಂದ ಇಲಾಖೆ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಆದರೆ ತೆಂಗಿನ ಮರದಿಂದ ಸೇಂದಿ ತೆಗೆಯಲಾರಂಭಿಸಿದರೆ, ಮದ್ಯ ಮಾರಾಟ ಕಡಿಮೆಯಾಗಿ, ಸರಕಾರದ ಬೊಕ್ಕಸಕ್ಕೆ ಆದಾಯ ಕಡಿಮೆಯಾಗುತ್ತಿದೆ ಎಂದು ಅಬ್ಕಾರಿ ಇಲಾಖೆ, ಈ ಕ್ರಮವನ್ನು ವಿರೋಧಿಸುತ್ತಿದೆ.
ತೋಟಗಾರಿಕೆ ಇಲಾಖೆಯ ಈ ಪ್ರಸ್ತಾವನೆಯ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನುಸಿರೋಗದ ಬಾಧೆ ಕಂಡು ಬಂದಿದ್ದು, ತೆಂಗಿನ ಹೂವು ಬಿಡುವ ಮೊದಲೇ ಸೇಂದಿ ತೆಗೆಯುವುದರಿಂದ ಮರಕ್ಕೆ ನುಸಿ ರೋಗ ತಗಲುವ ಸಂಭವ ಕಡಿಮೆಯಾಗುತ್ತದೆ. ಆದ್ದರಿಂದ ಸೇಂದಿ ತೆಗೆಯಲು ಅನುಮತಿ ನೀಡಿದಲ್ಲಿ ರೈತರಿಗೂ ಲಾಭವಾಗುತ್ತದೆ ಎಂದು ವೀರಭದ್ರಪ್ಪ ಅಭಿಪ್ರಾಯ ಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...