ಮೆಕ್ಕೆಜೋಳ ಖರೀದಿ : ಬಳ್ಳಾರಿ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಬಳ್ಳಾರಿ : ಕಳೆದ ಎರಡೂವರೆ ತಿಂಗಳಿನಿಂದ ನಿಲ್ಲಿಸಲಾಗಿರುವ ಮೆಕ್ಕೆ ಜೋಳ ಖರೀದಿ ಪ್ರಕ್ರಿಯೆನ್ನು ಆರಂಭಿಸುವಂತೆ ಆಗ್ರಹಿಸಿ ಕರೆ ನೀಡಲಾಗಿರುವ ಬಳ್ಳಾರಿ ಬಂದ್ಗೆ ಮಂಗಳವಾರ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಒಂದೆರಡು ಅಹಿತಕರ ಘಟನೆಗಳನ್ನು ಹೊರತು ಪಡಿಸಿ ನಗರದ ಪರಿಸ್ಥಿತಿ ಶಾಂತವಾಗಿದೆ.
ಬಂದ್ ಹಿನ್ನೆಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಕ್ಷೀಣಿಸಿತ್ತು. ಪ್ರತಿಭಟನಕಾರರು ನಾಲ್ಕು ಬಸ್ ಹಾಗೂ ಕೆಲವು ಅಂಗಡಿಗಳ ಮೇಲೆ ಕಲ್ಲುತೂರಿದ ಘಟನೆ ನಡೆಯಿತು. ಪೇಟೆಯ ಎಲ್ಲ ಅಂಗಡಿಗಳೂ ಮುಚ್ಚಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದವು. ರಸ್ತೆಗಳಲ್ಲಿ ವಾಹನ ಸಂಚಾರವೂ ಇರಲಿಲ್ಲ. ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಜೋಳಕ್ಕೆ ಬೆಂಕಿ : ಮೆಕ್ಕೆ ಜೋಳ ಖರೀದಿ ನಿಲ್ಲಿಸಿರುವುದನ್ನು ಹಾಗೂ ಗುಲ್ಬರ್ಗಾ ರೈತ ಮುಖಂಡರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಸೋಮವಾರ ಸಹ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾ ರೈತ ಹೋರಾಟ ಸಮಿತಿ ನಗರದ ರಾಯಲ್ ವೃತ್ತದಲ್ಲಿ ಮೆಕ್ಕೆಜೋಳಕ್ಕೆ ಬೆಂಕಿಹಾಕಿ ರಸ್ತೆ ತಡೆ ನಡೆಸಿತ್ತು.
ಸರಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ರಾಯಲ್ ವೃತ್ತಕ್ಕೆ ಬಂದ ಪ್ರತಿಭಟನೆಕಾರರು ಸೋಮವಾರ ರಸ್ತೆ ತಡೆ ಮಾಡಿದ್ದರು. ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
(ಬಳ್ಳಾರಿ ಪ್ರತಿನಿಧಿಯಿಂದ)