ನೀರು ಬಿಡುವವರೆಗೆ ಅನ್ನ ಮುಟ್ಟೆವು- ಬಿಆರ್ಡಬ್ಲ್ಯೂಪಿಸಿ
ಬಿಜಾಪುರ : ನೀರು ಬಿಡುವವರೆಗೆ ಅನ್ನ ಮುಟ್ಟೆವು ಎಂದು ಕುಡಿಯುವ ನೀರಿಗಾಗಿ ಆಮರಣಾಂತ ನಿರಶನ ನಡೆಸುತ್ತಿರುವ ಭೀಮಾ ನದಿ ನೀರು ರಕ್ಷಣಾ ಸಮಿತಿಯ (ಬಿಆರ್ಡಬ್ಲ್ಯೂಪಿಸಿ) ಸದಸ್ಯರು, ನಿರಶನ ಕೈ ಬಿಡುವಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸಚಿವರು ಮಾಡಿರುವ ಮನವಿಯನ್ನು ತಿರಸ್ಕರಿಸಿದ್ದಾರೆ.
ಕರ್ನಾಟಕದ ಸಚಿವ ಎಸ್.ಆರ್. ಕಾಶಪ್ಪನವರ್ ಹಾಗೂ ಮಹಾರಾಷ್ಟ್ರ ಸರ್ಕಾರದ ಸಚಿವ ಆನಂದರಾವ್ ದೇವಕಾಟೆ, ಸೋಮವಾರ ತೆಕ್ಕಾಳಿಯಲ್ಲಿ ನಿರಶನ ನಿರತರನ್ನು ಭೇಟಿ ಮಾಡಿ ಅನ್ನ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದ್ದರು. ಫೆಬ್ರವರಿ 9ರಂದೇ ಉಜನಿ ಅಣೆಕಟ್ಟೆಯಿಂದ 1.3 ಟಿಎಂಸಿ ನೀರನ್ನು ಹರಿಸಲಾಗಿದ್ದು, ಫೆಬ್ರವರಿ 15ರ ಹೊತ್ತಿಗೆ ರೈತರ ನೆಲವನ್ನು ನೀರು ನೆನೆಸಲಿದೆ ಎಂದರು.
ನಿರಶನ ನಿಲ್ಲಿಸೆವು : ಕುಡಿಯುವ ನೀರಿನ ಕೊರತೆಯನ್ನು 36 ಹಳ್ಳಿಗಳು ಎದುರಿಸುತ್ತಿವೆ. ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸಿರುವ ಬಿಆರ್ಡಬ್ಲ್ಯೂಪಿಸಿ ಸಮನ್ವಯಕ ಪಂಚಪ್ಪ ಕಲಬುರ್ಗಿ, ಸಮಸ್ಯೆ ಬಗೆಹರಿವವರೆಗೆ ನಿರಶನ ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಭೀಮಾ ಬೆಲ್ಟ್ನಲ್ಲಿ ಬ್ಯಾರೇಜುಗಳನ್ನು ನಿರ್ಮಿಸದಿರುವುದೇ ಭೀಮ ಬತ್ತಲಿಕ್ಕೆ ಕಾರಣ ಎಂದು ಮಹಾರಾಷ್ಟ್ರ ಸಚಿವ ದೇವಕಾಟೆ ಹೇಳಿದ್ದಾರೆ. ಆದರೆ, ಮಾನವೀಯತೆಯ ದೃಷ್ಟಿಯಿಂದ ಮಹಾರಾಷ್ಟ್ರ ನೀರನ್ನು ಬಿಡುಗಡೆ ಮಾಡುವುದು ಎಂದು ಅವರು ಸ್ಪಷ್ಟಪಡಿಸಿದರು.
(ಯುಎನ್ಐ)