ತಂಪು ಪಾನೀಯ, ಏಳನೀರ ಮಾರಾಟದ ಭರಾಟೆ
ಬೆಂಗಳೂರು : ಬೆಂಗಳೂರಿಗೆ ಬೇಸಿಗೆ ಬಿಸಿಲಿನ ಸ್ಪರ್ಶ. ಅರಳೆಯ ಬಟ್ಟೆಗಳಿಗೆ ಎಲ್ಲಿಲ್ಲದ ಬೇಡಿಕೆ. ಮತ್ತೆ ಗಂಟು, ಪೆಟ್ಟಿಗೆ ಸೇರಿದ ಉಣ್ಣೆಯ ವಸ್ತ್ರಗಳು, ರಸ್ತೆಯ ಬದಿಯಲ್ಲಿ ಕಲ್ಲಂಗಡಿ ಹಣ್ಣಿನ ರಾಶಿ ರಾಶಿ, ಎಳನೀರು, ತಂಪು ಪಾನೀಯದ ವ್ಯಾಪಾರದ ಭರಾಟೆ.
ಮತ್ತೆ ರಾರಾಜೀಸುತ್ತಿರುವ ಐಸ್ಕ್ರೀಂ, ಕೋಕಾಕೋಲಾ, ಪೆಪ್ಸಿಯ ಜಾಹೀರಾತು ಫಲಕಗಳು. ಮುಂದಿನ ದಿನಗಳಲ್ಲಿ ಸುಡುವ ಬಿಸಿಲಿನ ನಿರೀಕ್ಷೆಯಲ್ಲಿ ಹಪ್ಪಳ, ಸಂಡಿಗೆ ಒಣಗಿಸಲು ಮಾನಿನಿಯರ ತಯಾರಿ. ಇದಿಷ್ಟೂ ಈ ಹೊತ್ತು ಬೇಸಿಗೆಯ ಬಿಸಿಲಿನ ಲಾಭ ಪಡೆಯಲು ನಡೆದಿರುವ ಸಜ್ಜು.
ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಣಹವೆಯದೇ ಕಾರುಭಾರು. ಮುಂದಿನ 48 ಗಂಟೆಗಳ ಅವಧಿಯಲ್ಲೂ ಒಣಹವೆಯ ಮುನ್ಸೂಚನೆ. ಈ ಮಧ್ಯೆ ರಾಜ್ಯದ ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್ ಬಾಗಲಕೋಟೆಯಲ್ಲಿ ದಾಖಲಾಗಿತ್ತು.
ದಕ್ಷಿಣ ಒಳನಾಡಿನ ಕೆಲವೆಡೆ ಕನಿಷ್ಠ ತಾಪಮಾನ ಇಳಿದಿತ್ತು. ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೆಡೆಗಳಲ್ಲಿ ಅದು ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಇತ್ತು. ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಭ್ರ ಆಕಾಶ ಇದ್ದು, ದಿನದ ಕನಿಷ್ಠ ತಾಪಮಾನ 17 ಡಿಗ್ರಿಯ ಆಸುಪಾಸಿನಲ್ಲಿರುವ ಸಾಧ್ಯತೆ.