ವೀರಪ್ಪನ್ ಎಲ್ಲಿದ್ದಾನೆ? ವಾಳಯಾರ್ನಲ್ಲೋ, ಸತ್ಯಮಂಗಲದಲ್ಲೋ?
ಕೊಯಮತ್ತೂರು : ಕಾಡುಗಳ್ಳ ವೀರಪ್ಪನ್ ವಾಳಯಾರ್ ಅರಣ್ಯ ಪ್ರದೇಶದಿಂದ ಮತ್ತೆ ತನ್ನ ಸ್ವಸ್ಥಾನವಾದ ಸತ್ಯಮಂಗಲ ಕಾನನಕ್ಕೆ ಪಲಾಯನ ಮಾಡಿದ್ದಾನೆ ಎಂದು ಶಂಕಿಸಲಾಗುತ್ತಿದೆ. ಹತ್ತು ವರ್ಷಗಳಿಂದ ತಮಿಳು ನಾಡು ಹಾಗೂ ಕರ್ನಾಟಕ ಸರಕಾರಗಳಿಗೆ ಸವಾಲಾಗಿರುವ ವೀರಪ್ಪನ್ನನ್ನು ಹಿಡಿಯಲು ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆ ಫಲ ನೀಡಿಲ್ಲ. ಈ ಹೊತ್ತು ವೀರಪ್ಪನ್ ಎಲ್ಲಿದ್ದಾನೆ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಸ್ಥಳೀಯ ಗ್ರಾಮಸ್ಥರು ಸೂಕ್ತವಾಗಿ ಸಹಕರಿಸದಿರುವ ಕಾರಣ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಗ್ರಾಮಸ್ಥರ ಅಸಹಕಾರದಿಂದಾಗಿಯೇ ಕಾಡುಗಳ್ಳ ತನ್ನ ಸಹಚರರೊಂದಿಗೆ ಸತ್ಯಮಂಗಲಕ್ಕೆ ವಾಪಸಾಗಲು ಅವಕಾಶವಾಗಿದ್ದರೂ ಆಗಿರಬಹುದು ಎಂಬುದು ಎಸ್.ಟಿ.ಎಫ್. ಅಧಿಕಾರಿಗಳ ಅಭಿಪ್ರಾಯ.
ವಾಳಯಾರ್ ಪ್ರದೇಶದಲ್ಲಿ ಕಾರ್ಯಚರಣೆ ತೀವ್ರಗೊಂಡಿದ್ದರೂ, ವೀರಪ್ಪನ್ ಸುಳಿವಂತೂ ದೊರೆತಿಲ್ಲ. ಕರ್ನಾಟಕ ಹಾಗೂ ತಮಿಳುನಾಡು ಜಂಟಿ ಕಾರ್ಯಪಡೆ ಅಲ್ಲಿ ಬೀಡುಬಿಟ್ಟಿದೆ. ಕೇರಳ ಪೊಲೀಸರು ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಹತ್ತು ದಿನಗಳ ಹಿಂದೆ ವೀರಪ್ಪನ್ ತಂಡದ ಜತೆ ಗುಂಡಿನ ಚಕಮಕಿ ನಡೆದ ಬಳಿಕ ಹಾಗೂ ದೊರೆತ, ಡೈರಿ ಹಾಗೂ ಇನ್ನಿತರ ಸುಳಿವುಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿತ್ತು.
ಜಂಟಿ ಕಾರ್ಯಪಡೆ ಅಧಿಕಾರಿಗಳ ರೀತ್ಯ ವೀರಪ್ಪನ್ ಇನ್ನೂ ವಾಳಯಾರ್ನಲ್ಲೇ ಅಡಗಿದ್ದಾನೆ. ಹೀಗಾಗೆ ವೀರಪ್ಪನ್ಗಾಗಿ ಚಿನ್ನಂಪತ್ತಿ, ಸಿರುವಣಿ, ಅನನಕ್ಕತಿ ಅರಣ್ಯ ಪ್ರದೇಶದಲ್ಲಿ ಶೋಧ ಮುಂದುವರಿದಿದೆ.
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ