ವಾಳಯಾರ್ನಲ್ಲಿ ಸ್ಥಗಿತಗೊಂಡ ವೀರಪ್ಪನ್ ಕಾರ್ಯಾಚರಣೆ
ಕೊಯಮತ್ತೂರು : ಕಳೆದ ಹನ್ನೊಂದು ದಿನಗಳಿಂದ ವಾಳಯಾರ್ ಅರಣ್ಯ ಪ್ರದೇಶದಲ್ಲಿ ಕಾಡುಗಳ್ಳ ವೀರಪ್ಪನ್ಗಾಗಿ ನಡೆಸಿದ್ದ ತೀವ್ರ ಕಾರ್ಯಾಚರಣೆಯನ್ನು ಕರ್ನಾಟಕ ಕಾರ್ಯಪಡೆ ಸೋಮವಾರ ಸ್ಥಗಿತಗೊಳಿಸಿದೆ. ನರಹಂತಕ ವೀರಪ್ಪನ್ ತನ್ನ ಸಹಚರರೊಂದಿಗೆ ವಾಳಯಾರ್ನಿಂದ ಸತ್ಯಮಂಗಲ ಅರಣ್ಯಕ್ಕೆ ಪಲಾಯನ ಮಾಡಿರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ಕೇರಳ, ಕರ್ನಾಟಕ ಹಾಗೂ ತಮಿಳನಾಡು ಪೊಲೀಸರ ನಡುವೆ ಸಹಮತ ಇಲ್ಲದೇ ಇರುವುದೇ ವೀರಪ್ಪನ್ ವಾಳಯಾರ್ನಿಂದ ತಪ್ಪಿಸಿಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಸ್ಥಳೀಯ ಜನರು ಸಹಕಾರ ನೀಡದಿರುವ ಕಾರಣ ವೀರಪ್ಪನ್ ತಪ್ಪಿಸಿಕೊಂಡಿದ್ದಾನೆ ಎಂಬುದು ವೀರಪ್ಪನ್ ಶಿಕಾರಿಯಲ್ಲಿ ನಿರವಾಗಿರುವ ಎಸ್.ಟಿ.ಎಫ್. ಅಭಿಪ್ರಾಯ.
ಕಳೆದ 10 ದಿನಗಳ ಹಿಂದೆ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡು, ಪೊಲೀಸರು ಹಾಗೂ ವೀರಪ್ಪನ್ ತಂಡದ ನಡುವೆ ನಡೆದ ಗುಂಡಿನ ಚಕಮಕಿ ನಂತರ ದೊರೆತ ಡೈರಿ ಮತ್ತಿತರ ಮಾಹಿತಿಗಳ ಹಿನ್ನೆಲೆಯಲ್ಲಿ ವೀರಪ್ಪನ್ ಈ ಬಾರಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇತ್ತು. ಮಿಗಿಲಾಗಿ ವಾಳಯಾರ್ ಅರಣ್ಯ ಪ್ರದೇಶದ ಬಗ್ಗೆ ವೀರಪ್ಪನ್ಗೆ ಹೆಚ್ಚಿನ ಅರಿವು ಇಲ್ಲದ ಕಾರಣ ಹಾಗೂ ಸ್ಥಳೀಯರ ಬೆಂಬಲವೂ ದೊರಕದು ಎಂಬ ಹಿನ್ನೆಲೆಯಲ್ಲಿ ವೀರಪ್ಪನ್ ಬಂಧನ ಸುಲಭ ಎಂದೇ ಭಾವಿಸಲಾಗಿತ್ತು.
ವೀರಪ್ಪನ್ ತಪ್ಪಿಸಿಕೊಳ್ಳಲು ಸಜ್ಜಾಗಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡು, ವೀರಪ್ಪನ್ ತಂಡದವರೆಂದು ಶಂಕಿಸಲಾದ ಇಬ್ಬರನ್ನು ಬಂಧಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ತೀವ್ರ ಚಾಲನೆ ದೊರೆತಿತ್ತು. ಈ ಎಲ್ಲ ಬೆಳವಣಿಗೆಯ ನಡುವೆಯೂ ಕಾಡುಗಳ್ಳ ಮತ್ತೊಮ್ಮೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ