ಅಬಕಾರಿ ಸುಂಕ ವಂಚನೆಯಿಂದ 1450 ಕೋಟಿ ರು. ನಷ್ಟ
ಬೆಂಗಳೂರು : ಅಬಕಾರಿ ಸುಂಕ ವಂಚನೆಯಿಂದ ಸರಕಾರಕ್ಕೆ ಪ್ರತಿವರ್ಷಸುಮಾರು 1,450 ಕೋಟಿ ರೂಪಾಯಿ ನಷ್ಟವಾಗುತ್ತಿದ್ದರೆ ಬರುತ್ತಿರುವ ಆದಾಯ ಸುಮಾರು ಒಂದು ಸಾವಿರ ಕೋಟಿ ಮಾತ್ರ ಎಂದು ರಾಜ್ಯ ತೆರಿಗೆ ಸುಧಾರಣಾ ಆಯೋಗದ ವರದಿ ಹೇಳಿದೆ.
ಆಯೋಗದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ವರದಿಯನ್ನು ಸೋಮವಾರ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ದೇಶೀಯವಾಗಿ ತಯಾರಿಸುವ ಮದ್ಯದಿಂದಲೇ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ತೆರಿಗೆ ವಂಚನೆ ಆಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಮುಂದಿನ ಬಜೆಟ್ನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಈ ಬಗ್ಗೆ ಹೆಚ್ಚಿನ ವಿವರ ನೀಡಲು ಮೊಯ್ಲಿ ನಿರಾಕರಿಸಿದರು.
ತೆರಿಗೆಗೆ ಸಂಬಂಧಿಸಿದಂತೆ, ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಆಯೋಗ ಮಾಡಿದ ಶಿಫಾರಸ್ಸಿಗೆ ಮುಖ್ಯ ಮಂತ್ರಿಗಳು ಸ್ಪಂದಿಸಿದ್ದಾರೆ ಎಂದೂ ಮೊಯ್ಲಿ ಹೇಳಿದರು. ತೆರಿಗೆ ಹೆಚ್ಚಳದಿಂದ ಯಾವುದೇ ಪ್ರಯೋಜನವಾಗುವುದಿಲ್ಲ , ಬದಲಾಗಿ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯ ಕರ್ನಾಟಕ ಎಂಬುದು ಸುಳ್ಳು. ತೆರಿಗೆಯಿಂದ ಬರುತ್ತಿರುವ ಆದಾಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಂತಹ ಪ್ರಗತಿಯೇನೂ ಆಗಿಲ್ಲ ಎಂದ ಮೊಯ್ಲಿ ಆಯೋಗವು ಅಂತಿಮ ವರದಿಯನ್ನು ಜೂನ್ ತಿಂಗಳ ಹೊತ್ತಿಗೆ ಸರಕಾರಕ್ಕೆ ಸಲ್ಲಿಸಲಿದೆ ಎಂದರು.
(ಯುಎನ್ಐ)