ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿತು, ನಾಸ್ಡಾಕ್ ಕಚೇರಿ
ಬೆಂಗಳೂರು : ಅಮೆರಿಕಾ ಮೂಲದ ನಾಸ್ಡಾಕ್ನ ಭಾರತೀಯ ಕಚೇರಿ ಬೆಂಗಳೂರಿನ ಯು.ಎನ್.ಐ. ಸಮುಚ್ಚಯದ ಆವರಣದಲ್ಲಿ ಸೋಮವಾರ ಕಾರ್ಯಾರಂಭ ಮಾಡಿತು. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ನಾಸ್ಡಾಕ್ನ ಉಪಾಧ್ಯಕ್ಷ ಆಲ್ಫ್ರೆಡ್ ಬರ್ಕ್ಲಿ ಅವರು ದೀಪ ಬೆಳಗಿಸುವ ಮೂಲಕ ಭಾರತೀಯ ಶಾಖೆಯನ್ನು ಉದ್ಘಾಟಿಸಿದರು.
ನಾಸ್ಡಾಕ್ನಲ್ಲಿ ತಮ್ಮ ವಹಿವಾಟು ದಾಖಲಿಸಲು ತುದಿಗಾಲಿನಲ್ಲಿ ನಿಂತಿರುವ ಹಲವು ಕಂಪನಿಗಳಿಗೆ ಹಾಗೂ ಹಾಲಿ ನಾಸ್ಡಾಕ್ ಪಟ್ಟಿಯಲ್ಲಿರುವ ಕಂಪನಿಗಳಿಗೆ ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ಕಚೇರಿ ಹೆಚ್ಚಿನ ಸೇವೆಯನ್ನು ಒದಗಿಸಲಿದೆ ಎಂದು ಬರ್ಕ್ಲಿ ತಿಳಿಸಿದರು.
ನಮ್ಮ ಆಗಮನದ ಬಗ್ಗೆ ಭಾರತೀಯರು ಮಹತ್ವದ ಆಶಯಗಳನ್ನು ಹೊಂದಿದ್ದಾರೆ, ಅವರ ಆಶಯಗಳಿಗೆ ತಕ್ಕಂತೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದು ಬರ್ಕ್ಲಿ ತಿಳಿಸಿದರು. ಅಮೆರಿಕದಲ್ಲಿ ಹೆಸರುಗಳಿಸುವಲ್ಲಿ ಹೆಚ್ಚಿನ ಶ್ರಮ ವಹಿಸುವಂತೆ ಅವರು ಭಾರತೀಯ ಕಂಪನಿಗಳಿಗೆ ಈ ಸಂದರ್ಭದಲ್ಲಿ ಕರೆ ನೀಡಿದರು.
ಧನ್ಯವಾದ : ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದ ನಾಸ್ಡಾಕ್ ಸಂಸ್ಥೆಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಧನ್ಯವಾದ ಅರ್ಪಿಸಿದರು. ಕರ್ನಾಟಕ ವಿಶ್ವ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಿದ್ದು, ಬಂಡವಾಳ ಮಾರುಕಟ್ಟೆಗೆ ಹೆಚ್ಚಿನ ಚಾಲನೆ ನೀಡುವುದಾಗಿ ಅವರು ತಿಳಿಸಿದರು.
ಬಯೋ ಟೆಕ್ನಾಲಜಿ ಇತ್ತೀಚಿನ ದಿನಗಳಲ್ಲಿ ಹೊಸ ಆಯಾಮ ಪಡೆದಿದ್ದು, ಸರಕಾರವು ತತ್ಸಂಬಂಧವಾಗಿ ಪರಿಶೀಲನಾ ಸಮಿತಿಗಳನ್ನು ರಚಿಸಿದೆ ಎಂದೂ ಹೇಳಿದರು. ನಾಸ್ಡಾಕ್ ವಿಶ್ವಾದ್ಯಂತ ಒಟ್ಟು 4700 ಕಂಪನಿಗಳ ಬೃಹತ್ ಪಟ್ಟಿಯನ್ನೇ ಹೊಂದಿದ್ದು, ದಿನವಹಿ ಎರಡು ಬಿಲಿಯನ್ ಷೇರು ವಹಿವಾಟು ನಡೆಸುವ ಏಕೈಕ ಸಂಸ್ಥೆಯಾಗಿದೆ. ಸಂಸ್ಥೆಯು ದಕ್ಷಿಣ ಏಷ್ಯಾ ಚಟುವಟಿಕೆಗಳನ್ನು ನಿರ್ವಹಿಸಲು ಘನಶ್ಯಾಮ್ ದಾಸ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿದೆ.
(ಯು.ಎನ್.ಐ)