ಲಷ್ಕರ್ -ಇ- ತೋಯಿಬಾ ಗುರಿ ಪ್ರಧಾನಿ ಹಾಗೂ ಅಡ್ವಾಣಿ
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಎಚ್ಚರಿಸಿರುವ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್ -ಇ - ತೋಯಿಬಾ, ಇಲ್ಲವಾದರೆ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಗೃಹ ಸಚಿವ ಎಲ್.ಕೆ. ಆಡ್ವಾಣಿಯವರನ್ನು ತಮ್ಮ ಗುರಿ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದೆ.
ಕಾಶ್ಮೀರ ವಿವಾದದ ಬಗ್ಗೆ ಭಾರತ - ಪಾಕ್ ಮಾತುಕತೆ ನಡೆಸುವುದನ್ನು ವಿರೋಧಿಸಿರುವ ಈ ಸಂಘಟನೆಯ ನಾಯಕ ಮಹ್ಮದ್ ಹಫೀಜ್ ಸಯ್ಯದ್ ಸರ್ವಪಕ್ಷ ಹುರಿಯತ್ ಕಾನ್ಫರೆನ್ಸ್ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ಸ್ವಾಗತಿಸಿದ್ದಾನೆ. ಆದರೆ, ಇದನ್ನು ಭಾರತ ಸರಕಾರ ಇಚ್ಛಿಸುತ್ತಿಲ್ಲ ಎಂದೂ ಆರೋಪಿಸಿದ್ದಾನೆ.
ಟಿ.ವಿ. ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಈತ ಕಳೆದ ಡಿಸೆಂಬರ್ನಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ದಾಳಿಯ ರೀತಿಯಲ್ಲೇ ಭಾರತಾದ್ಯಂತ ದಾಳಿ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಕಾಶ್ಮೀರ ಪ್ರದೇಶದಿಂದ ಸೇನೆಯನ್ನು ವಾಪಸ್ ಕರೆಸಿಕೊಂಡು, ವಿವಾದಕ್ಕೆ ಪರಿಹಾರ ಕಂಡು ಹಿಡಿವ ತನಕ ತಮ್ಮ ಆತ್ಮಹತ್ಯಾದಳದ ದಾಳಿ ನಿಲ್ಲದು ಎಂದೂ ಆತ ಹೇಳಿದ್ದಾನೆ. ತಮ್ಮ ಈ ಹೋರಾಟವನ್ನು ಧರ್ಮಯುದ್ಧ ಎಂದೂ ಆತ ಕರೆದುಕೊಂಡಿದ್ದಾನೆ. (ಯು.ಎನ್.ಐ)