ಏಪ್ರಿಲ್ ಒಂದರಿಂದ 715 ವಸ್ತುಗಳ ಮುಕ್ತ ಆಮದಿಗೆ ಅವಕಾಶ
ನುಂಗುನೇರಿ : ರಾಜ್ಯದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಕೇಂದ್ರದ ಆಮದು ನೀತಿ ಮತ್ತು ಡಬ್ಲ್ಯೂಟಿಒ ಒಪ್ಪಂದಗಳ ವಿರುದ್ಧ ಹೋರಾಡುತ್ತಿರುವಾಗಲೇ ಕೇಂದ್ರ ಸರಕಾರವು 715 ವಸ್ತುಗಳ ಆಮದಿನ ಮೇಲಿರುವ ನಿರ್ಬಂಧಗಳನ್ನು ಏಪ್ರಿಲ್ ಒಂದರ ವೇಳೆಗೆ ಸಂಪೂರ್ಣವಾಗಿ ತೆಗೆದು ಹಾಕಲು ನಿರ್ಧರಿಸಿದೆ.
ಈ ವಿಷಯವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಮುರಸೋಳಿ ಮಾರನ್ ತಿಳಿಸಿದ್ದಾರೆ. ಅವರು ಭಾನುವಾರ ತಮಿಳುನಾಡಿನ ನುಂಗನೇರಿಯಲ್ಲಿ ಭಾರತದ ಪ್ರಥಮ ವಿಶೇಷ ಆರ್ಥಿಕ ವಲಯದ ಕಚೇರಿಗೆ ಶಂಕು ಸ್ಥಾಪನೆ ಮಾಡಿದ ನಂತರ ಸುದ್ದಿಗಾರರರೊಂದಿಗೆ ಮಾತನಾಡುತ್ತಿದ್ದರು.
ಕೇಂದ್ರ ಸರಕಾರವು ಹತ್ತು ಬಿಲಿಯನ್ ಡಾಲರ್ ವಿದೇಶೀ ನೇರ ಬಂಡವಾಳ ಆಕರ್ಷಿಸಲು ರಕ್ಷಣಾ ವಲಯವನ್ನು ಹೊರತು ಪಡಿಸಿ, ಇತರ ಬಂಡವಾಳ ಹೂಡಿಕೆ ಕ್ಷೇತ್ರಗಳ ಮೇಲೆ ಇರುವ ನಿರ್ಬಂಧವನ್ನೂ ತೆಗೆದು ಹಾಕಲಿದೆ ಎಂದು ಅವರು ಹೇಳಿದರು.
ಕುಸಿಯುತ್ತಿರುವ ರಫ್ತು ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆರ್ಥಿಕ ವರ್ಷದಲ್ಲಿ ಶೇ 18ರ ಬೆಳವಣಿಗೆಯನ್ನು ನಿಗದಿಪಡಿಸಲಾಗುವುದು. ವಿಶೇಷ ಆರ್ಥಿಕ ವಲಯಗಳಿಗೆ ವಿಶೇಷ ಕಾರ್ಯನೀತಿ (ಪ್ಯಾಕೇಜ್) ಘೋಷಿಸಲಾಗುವುದು ಎಂದು ಸಚಿವರು ವಿವರಿಸಿದರು.
(ಇನ್ಫೋ ವಾರ್ತೆ)