ಹೈಕೋರ್ಟ್ ಪೀಠ ಸ್ಥಾಪನೆ : ಮುಖ್ಯನ್ಯಾಯಮೂರ್ತಿಗೆ ಮತ್ತೆ ಮನವಿ
ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ವೆಂಕಟರಾಮ ರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ರಾಜ್ಯ ವಕೀಲರ ಮಂಡಳಿ ಭಾನುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಿದೆ.
ಎರಡು ವಾರಗಳ ಹಿಂದೆ ಪದಾಧಿಕಾರಿಗಳ ಸಭೆ ನಡೆದಾಗ ಹೈಕೋರ್ಟ್ ಪೀಠ ಸ್ಥಾಪನೆ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಮಂಡಳಿಯ ಪ್ರತಿನಿಧಿಗಳು ಇನ್ನೆರಡು ದಿನದಲ್ಲಿಯೇ ವೆಂಕಟರಾಮ ರೆಡ್ಡಿ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ.
ನ್ಯಾಯಮೂರ್ತಿ ಅಶೋಕ್ ಭಾನ್ ನೇತೃತ್ವದ ಸಮಿತಿ ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲಿ ಪೀಠ ಸ್ಥಾಪನೆ ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಈ ನಡುವೆ ರಾಜ್ಯಗಳ ಪುನರ್ ವಿಂಗಡಣೆ ಕಾಯ್ದೆ ಅನುಸಾರ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವುದಾಗಿ ರಾಜ್ಯ ಸರಕಾರ ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರ ಸರಕಾರವನ್ನು ಒತ್ತಾಯಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)