ಆಡ್ವಾಣಿ, ಜೋಷಿ ಸೇರಿದಂತೆ 8 ಜನರ ವಿರುದ್ಧ ಕ್ರಮಕ್ಕೆ ತಡೆ
ಅಲಹಾಬಾದ್ : 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ. ಒಟ್ಟು 49 ಆರೋಪಿಗಳ ಪೈಕಿ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ, ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ 40 ಜನರ ವಿರುದ್ಧ ಕ್ರಮ ಜರುಗಿಸಲು ಪ್ರಕ್ರಿಯೆ ಆರಂಭಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.
ಕೇಂದ್ರ ಗೃಹ ಸಚಿವ ಎಲ್.ಕೆ. ಆಡ್ವಾಣಿ, ಮಾನವ ಸಂಪನ್ಮೂಲ ಖಾತೆ ಸಚಿವ ಮುರಳಿ ಮನೋಹರ ಜೋಷಿ ಹಾಗೂ ಇತರ 8 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ತಡೆ ನೀಡಿದೆ. ಇತ್ತೀಚೆಗೆ ನಿಧನರಾದ ರಾಜಮಾತೆ ವಿಜಯ ರಾಜೇ ಸಿಂಧ್ಯಾ ಅವರ ಹೆಸರನ್ನು ನ್ಯಾಯಾಲಯ ಕೈ ಬಿಟ್ಟಿದೆ.
ನಲವತ್ತೊಂಬತ್ತು ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ 1997ರಲ್ಲಿ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆ ನೀಡುವಂತೆ ಉಮಾಭಾರತಿ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ನ್ಯಾಯಾಲಯವು ಸೋಮವಾರ ಮಧ್ಯಾಹ್ನ ಈ ಮಹತ್ವದ ತೀರ್ಪು ನೀಡಿದೆ.
ಆಡ್ವಾಣಿ, ಜೋಷಿ ಅವರಲ್ಲದೆ ಕ್ರೀಡಾ ಸಚಿವೆ ಉಮಾ ಭಾರತಿ, ಸಂಘ ಪರಿವಾರದ ನಾಯಕರಾದ ವಿನಯ್ ಕತಿಯಾರ್, ಗಿರಿರಾಜ ಕಿಶೋರ್, ವಿ.ಎಚ್. ದಾಲ್ಮಿಯಾ ಮತ್ತು ಸಾಧ್ವಿ ರಿತಾಂಬರ ಅವರ ವಿರುದ್ಧ ಕೂಡ ಕಾನೂನು ಕ್ರಮ ಜರುಗಿಸದಂತೆ ನ್ಯಾಯಾಲಯ ತಡೆ ನೀಡಿದೆ. ಈ ಎಂಟು ಪ್ರಕರಣಗಳ ವಿರುದ್ಧ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪಿಸುವುದು ಅಸಂವಿಧಾನಿಕವಾಗುತ್ತದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.