ರಂಗಿನ ಏರೋ ಇಂಡಿಯಾ -2001 - ಇಂದು ಕೊನೆಯ ದಿನ
ಬೆಂಗಳೂರು : ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ರಂಗುರಂಗಿನ ವೈಮಾನಿಕ ಪ್ರದರ್ಶನಕ್ಕೆ ರಂಗೇರಿದೆ. ಮೊದಲೆರಡು ದಿನ ಬಾರದಿದ್ದ ಎಲ್.ಸಿ.ಎ. ಹಾರಾಟ ನಡೆಸಿದ ಮೇಲೆ ವೈಮಾನಿಕ ಪ್ರದರ್ಶನ ಸ್ಥಳದಲ್ಲಿ ಜನಸಾಗರ. ಶನಿವಾರದ ರಜೆಯೂ ಇದಕ್ಕೆ ಪೂರಕವಾಗಿತ್ತು.
ಬಾನಂಗಳದಲ್ಲಿ ನಡೆಯುವ ಕಸರತ್ತು ಕಾಣಲು ಸಾವಿರಾರು ಜನರು ಆಗಮಿಸಿದ್ದರು. ಶನಿವಾರ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ವೈಮಾನಿಕ ಪ್ರದರ್ಶನ - ಕಸರತ್ತುಗಳನ್ನು ಕಂಡು ಆನಂದ ಅನುಭವಿಸಿದರು. ಇಂದು ಪ್ರದರ್ಶನದ ಕೊನೆಯ ದಿನ. ಭಾನುವಾರದ ರಜೆಯ ಹಿನ್ನೆಲೆಯಲ್ಲಿ 50- 60 ಸಾವಿರ ಜನರು ಬರುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ನಿರಾಶೆ : ಎರಡು ದಿನಗಳ ತರುವಾಯ ಬಾನಂಗಳದಿ ಕಾಣಿಸಿಕೊಂಡ ಲಘು ಸಮರ ವಿಮಾನ ಇಂದು ಮತ್ತೆ ಇಲ್ಲಿಗೆ ಬರಲೇ ಇಲ್ಲ. ಸುಖಾಯ್ ಕೂಡ ಸುಳಿಯಲಿಲ್ಲ. ಎಲ್.ಸಿ.ಎ. ಕಾಣಲೆಂದೇ ಬಂದಿದ್ದ ಸಾವಿರಾರು ಜನ ನಿರಾಶೆಗೊಂಡರಾದರು, ಸೂರ್ಯಕಿರಣ್, ಜಾಗ್ವಾರ್, ಮಿಗ್ ಪ್ರದರ್ಶನ ಕಂಡು ನಿಬ್ಬೆರಗಾದರು.
ಬೇಸಿಗೆಗೆ ಮುನ್ನವೇ ಸುಡುತ್ತಿದ್ದ ಸೂರ್ಯನನ್ನೂ ಲೆಕ್ಕಿಸದೆ, ಬಾನಿನತ್ತ ಮುಖವಿಟ್ಟು, ವೀಕ್ಷಕ ವಿವರಣೆಕಾರರು ನೀಡುತ್ತಿದ್ದ ಮಾಹಿತಿಗಳನ್ನು ಆಲಿಸುತ್ತಾ ಆಗಸದಲ್ಲಿ ಮೂಡುತ್ತಿದ್ದ ರಂಗುರಂಗಿನ ರಂಗೋಲಿಗಳನ್ನು ವೀಕ್ಷಿಸಿದರು. ಪ್ಯಾರಾಚೂಟ್ಗಳ ಕಸರತ್ತು, ತ್ರಿವರ್ಣ ಧ್ವಜದ ಬಣ್ಣದ ಧೂಮ ಕಣ್ಮನ ಸೆಳೆಯಿತು. ಭಾನವಾರ ಬೆಳಗ್ಗಿನಿಂದಲೇ ಜನ ಯಲಹಂಕದತ್ತ ಧಾವಿಸುತ್ತಿದ್ದರು. ವಿಶೇಷ ಬಸ್ಗಳೂ ತುಂಬಿ ತುಳುಕುತ್ತಿದ್ದವು. ಕಾಳಸಂತೆಯಲ್ಲಿ ಟಿಕೆಟ್ ಮಾರಾಟವಾಗುತ್ತಿರುವ ವರದಿಗಳೂ ಬಂದಿವೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...