ದಾವಣಗೆರೆ : ಸಿನಿಮೀಯ ಶೈಲಿಯಲ್ಲಿ ಇಬ್ಬರು ವೈದ್ಯರ ಅಮಾನತು
ದಾವಣಗೆರೆ : ಒಂದೆಡೆ ಸರ್ಕಾರಿ ಸೇವಕರಾಗಿದ್ದ ಚಿತ್ರನಟ ಬಿ.ಸಿ.ಪಾಟೀಲ್ ಅಮಾನತ್ತಾಗಿ, ಕಷ್ಟಗಳ ಮೇಲೆ ಕಷ್ಟ ಎದುರಿಸುತ್ತಿದ್ದಾರೆ. ಇದೇ ಗತಿ ಇನ್ನೇನು ನಾಳೆಯೋ ನಾಳಿದ್ದೋ ಚಿತ್ರನಟ ಕೆ.ಶಿವರಾಂ ಅವರಿಗೂ ಬರಬಹುದೆಂದು ಗಾಂಧಿನಗರ ಮಾತಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ದಾವಣಗೆರೆ ಜಿಲ್ಲಾಧಿಕಾರಿ ಕೆ.ಶಿವರಾಂ ಧೂಳು ಕೊಡವಿಕೊಂಡು ಎದ್ದಿದ್ದಾರೆ. ಅದನ್ನು ಸಾಬೀತು ಪಡಿಸಲೋ ಎಂಬಂತೆ, ಶನಿವಾರ ಇಬ್ಬರು ವೈದ್ಯರನ್ನು ಅಮಾನತ್ತು ಮಾಡಿದ್ದಾರೆ.
ಡಾ. ಜಗದೀಶ್ ಹಾಗೂ ಡಾ. ರಾಜು ಇವರೇ ಅಮಾನತ್ತುಗೊಂಡಿರುವ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ವೈದ್ಯಕೀಯ ಅಧಿಕಾರಿಗಳು. ಡಾ.ಜಗದೀಶ್ ಅವರನ್ನು ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಗೆ ನೇಮಿಸಲಾಗಿತ್ತು. ಆದರೆ ಅವರು ಅಲ್ಲಿಗೆ ಹೋಗಲೇ ಇಲ್ಲ. ಇನ್ನು ಹೂವಿನಮಡುವಿಗೆ ನಿಯೋಜಿಸಲಾಗಿದ್ದ ಡಾ.ರಾಜು ಸರ್ಕಾರಿ ಸೇವೆಯನ್ನು ನಿರ್ಲಕ್ಷಿಸಿ ಜನರಿಂದ ಕಾಸು ಕಿತ್ತುಕೊಂಡು ಖಾಸಗಿ ಸೇವೆ ಮಾಡುತ್ತಿದ್ದರು. ಈ ಕಾರಣ ಇಬ್ಬರನ್ನೂ ಕೆ.ಶಿವರಾಂ ಅಮಾನತ್ತು ಮಾಡಿದ್ದು, ತಾವು ಮೈಯೆಲ್ಲಾ ಕಣ್ಣಾಗಿ ದುಡಿಯುತ್ತಿರುವುದನ್ನು ತೋರಿದ್ದಾರೆ.
ಶಿವರಾಂ ಅವರನ್ನು ಅಮಾನತ್ತು ಮಾಡುವ ಯೋಚನೆಯೇನಾದರೂ ಸರ್ಕಾರಕ್ಕೆ ಇದ್ದಲ್ಲಿ ಅವರ ಈ ಕರ್ತವ್ಯಪರತೆಗೆ ಮೆಚ್ಚಿ ಆ ಯೋಚನೆ ಕೈ ಬಿಟ್ಟರೂ ಆಶ್ಚರ್ಯವೇನಿಲ್ಲ ಎಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿರುವುದರಲ್ಲಿ ವ್ಯಂಗ್ಯವೇನೂ ಕಾಣುತ್ತಿಲ್ಲ.
(ಯುಎನ್ಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...