ಭೂಕಂಪ ಸಂತ್ರಸ್ತರ ನೆರವಿಗೆ ರಾಜ್ಯ ಸರಕಾರಿನೌಕರರ ಸಂಘ
ಬೆಂಗಳೂರು : ಒಂದು ದಿನದ ವೇತನವನ್ನು ಗುಜರಾತ್ ಭೂಕಂಪ ಪರಿಹಾರ ನಿಧಿಗೆ ನೀಡಲು ರಾಜ್ಯ ಸರಕಾರಿ ನೌಕರರ ಸಂಘ ನಿರ್ಧರಿಸಿದೆ ಹಾಗೂ ರಾಜ್ಯ ಸರಕಾರಿ ನೌಕರರು ಸಿನೆಮಾದಲ್ಲಿ ನಟಿಸಬಾರದು ಎಂಬ ಆದೇಶವನ್ನು ಪುನರ್ ಪರಿಶೀಲಿಸಲು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ರಾಜ್ಯ ಸರಕಾರಿ ನೌಕರರ ಸಂಘದ ಫೆಬ್ರವರಿ ತಿಂಗಳ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಸಂಘದ ಅಧ್ಯಕ್ಷ ಕೆ. ಸಿದ್ಧಪ್ಪ ಗೌಡ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಪರಿಹಾರ ನಿಧಿಗೆ ಒಟ್ಟು 15 ಕೋಟಿ ರೂಪಾಯಿಯನ್ನು ಕಳುಹಿಸಲಾಗುವುದು. ಈ ಕುರಿತು ಸಭೆ ಕೈಗೊಂಡ ನಿರ್ಣಯದ ಪ್ರತಿಯನ್ನು ಈಗಾಗಲೇ ರಾಜ್ಯ ಕಾರ್ಯದರ್ಶಿ ತೆರೆಸಾ ಭಟ್ಟಾಚಾರ್ಯ ಮತ್ತು ಮುಖ್ಯಮಂತ್ರಿ ಎಸ್. ಎಂ. ಕಷ್ಣ ಅವರಿಗೆ ಕಳುಹಿಸಲಾಗಿದೆ ಎಂದರು.
ನಟನೆಗೆ ಅವಕಾಶ ನೀಡಬೇಕು : ಸರಕಾರಿ ನೌಕರರು ಚಲನಚಿತ್ರದಲ್ಲಿ ನಟಿಸಬಾರದು ಎಂಬ ಆದೇಶವನ್ನು ಸರಕಾರ ಪುನರ್ಪರಿಶೀಲಿಸಬೇಕೆಂದು ಸಭೆ ಸರಕಾರವನ್ನು ಒತ್ತಾಯಿಸಿದೆ. ಸರಕಾರಿ ನೌಕರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸರಕಾರ ಅವಕಾಶ ನೀಡಬೇಕು. ನೌಕರರು ಸಿನಿಮಾ ನಟನೆಗೆ ಸಂಭಾವನೆ ತೆಗೆದುಕೊಂಡಲ್ಲಿ ಮಾತ್ರ ಅವರನ್ನು ಶಿಕ್ಷಿಸಬೇಕು. ಈ ಬಗ್ಗೆ ಅಗತ್ಯವೆನಿಸಿದಲ್ಲಿ ಸಂಘದ ಪ್ರತಿನಿಧಿಗಳು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡುವರು ಎಂದು ಸಿದ್ಧಪ್ಪ ಹೇಳಿದರು. ಮಂಡ್ಯದಲ್ಲಿ ಮೂರು ದಿನಗಳ ರಾಜ್ಯ ಸರಕಾರಿ ನೌಕರರ ಸಮ್ಮೇಳನ ಮಾರ್ಚ್ ಮೂರರಿಂದ ನಡೆಯಲಿದೆ. ಮುಖ್ಯಮಂತ್ರಿಗಳು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ ಎಂದೂ ಸಿದ್ದಪ್ಪ ಹೇಳಿದರು.
(ಯುಎನ್ಐ)