ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ಹೇರಿದ್ದ ನಿಷೇಧ ರದ್ದು
ಬೆಂಗಳೂರು : ಸರ್ಕಾರಿ ಹುದ್ದೆಗಳ ನೇರ ನೇಮಕಾತಿಗೆ ಹೇರಿದ್ದ ನಿಷೇಧವನ್ನು ರಾಜ್ಯ ಸರ್ಕಾರ ರದ್ದು ಪಡಿಸಿದೆ ಎಂದು ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ತಿಳಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗ್ರಾಮೀಣರಿಗೆ ಶೇ. 25 ರಷ್ಟು ಆದ್ಯತೆ ಕಲ್ಪಿಸುವ ಸುಗ್ರೀವಾಜ್ಞೆ ಯನ್ನು ರಾಜ್ಯಪಾಲರು ಹೊರಡಿಸಿರುವುದರಿಂದ ನೇರ ನೇಮಕಾತಿಗೆ ಹೇರಿದ್ದ ನಿಷೇಧವನ್ನು ರದ್ದು ಪಡಿಸಲು ನಿರ್ಧರಿಸಲಾಗಿದೆ ಎಂದರು.
ನಿಷೇಧ ಹೇರುವುದಕ್ಕೆ ಮುನ್ನ ಅರ್ಜಿ ಆಹ್ವಾನಿಸಿದ್ದ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಈ ಮೊದಲು ಗ್ರಾಮೀಣ ವಿದ್ಯಾರ್ಥಿಗಳ ಕೃಪಾಂಕ ಸಂಬಂಧ ಉಂಟಾದ ಗೊಂದಲದ ಕಾರಣ, ನೇರ ನೇಮಕಾತಿಗೆ ಸರ್ಕಾರ ನಿಷೇಧ ಹೇರಿತ್ತು .
ಕೊಳ್ಳೇಗಾಲ ತಾಲ್ಲೂಕಿನ ಬಂಡಳ್ಳಿಯಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಇಬ್ಬರು ವ್ಯಕ್ತಿಗಳು ಸತ್ತ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಹಾಗೂ ಗುಲ್ಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪಡೆದಿದ್ದ 1.04 ಕೋಟಿ ಸಾಲವನ್ನು ಷೇರು ಬಂಡವಾಳವನ್ನಾಗಿ ಪರಿವರ್ತಿಸಲು ನ ಗುರುವಾರದ ಸಂಪುಟ ಸಭೆ ನಿರ್ಧರಿಸಿದೆ ಎಂದು ಚಂದ್ರೇಗೌಡ ಹೇಳಿದರು.
ಸಂಪುಟ ಸಭೆ ತೆಗೆದುಕೊಂಡ ಮತ್ತೊಂದು ಮಹತ್ವದ ನಿರ್ಧಾರದಲ್ಲಿ ಹಿರಿಯ ಐಎಎಸ್ ಅಧಿಕಾರಿ ಬಿ.ಎಲ್. ಶ್ರೀಧರ್ ಸೇರಿದಂತೆ ಮೂವರು ಉನ್ನತಾಧಿಕಾರಿಗಳನ್ನು, ಧಾರವಾಡ ಜಿಲ್ಲೆಯಲ್ಲಿ ಕೃಷ್ಯುತ್ಪನ್ನಗಳನ್ನು ಕೊಳ್ಳುವ ವಿಷಯದಲ್ಲಿ ತೋರಿದ ಅಲಕ್ಷ್ಯದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿರುವ ನಿರ್ಧಾರವನ್ನು ದೃಢೀಕರಿಸಲಾಯಿತು.
(ಯುಎನ್ಐ)