5 ಸಾವಿರ ಕೊಟ್ಟು ತಮ್ಮ ಹಾರವನ್ನು ತಾವೇ ಕೊಂಡ ಎಸ್.ಎಂ. ಕೃಷ್ಣ
ಬೆಂಗಳೂರು : ಕ್ರಿಕೆಟ್ ಕಲಿಗಳ ಬ್ಯಾಟು, ಚೆಂಡು, ಚಿತ್ರತಾರೆಯರ ಹಸ್ತಾಕ್ಷರ ಉಳ್ಳ ಭಾವಚಿತ್ರಗಳು ಹರಾಜಿನಲ್ಲಿ ಸಾವಿರಾರು ರುಪಾಯಿಗೆ ಮಾರಾಟವಾಗುವುದು ಸರ್ವ ಸಾಮಾನ್ಯ. ಆದರೆ, ಹರಾಜಿನಲ್ಲಿ ತಮ್ಮ ವಸ್ತುವನ್ನು ತಾವೇ ಕೊಂಡ ಬಗ್ಗೆ ಕೇಳಿದ್ದೀರಾ? ಬುಧವಾರ ನಮ್ಮ ಮುಖ್ಯಮಂತ್ರಿ ತಮ್ಮ ಹಾರಕ್ಕೆ ತಾವೇ 5 ಸಾವಿರ ಕೊಟ್ಟು ಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂತು.
ಮುಖ್ಯಮಂತ್ರಿಗಳ ಗಂಧದ ಹಾರವನ್ನು ಹರಾಜು ಮಾಡಿ ಅದರಿಂದ ಬರುವ ಹಣವನ್ನು ಗುಜರಾತ್ ಸಂತ್ರಸ್ತರಿಗೆ ನೀಡುವುದಾಗಿ ಪ್ರಕಟಿಸಿದ ಸರ್.ಎಂ.ವಿ. ಸ್ಮಾರಕ ಪ್ರತಿಷ್ಠಾನದ ವ್ಯವಸ್ಥಾಪಕರು ಕೃಷ್ಣರನ್ನು ಪೇಚಿಗೆ ಸಿಲುಕಿಸಿದರು. ಯಾರೊಬ್ಬರೂ ಹಾರ ಖರೀದಿಸಲು ಮುಂದೆ ಬಾರದಿದ್ದಾಗ, ವಿಧಿಯಿಲ್ಲದೆ ಕೃಷ್ಣ ತಮ್ಮ ಹಾರವನ್ನು ತಾವೇ ಕೊಂಡರು. ತಾವು ಕೊಂಡ ಹಾರವನ್ನು ಹರಾಜು ಕೂಗುತ್ತಿದ್ದ ವ್ಯಕ್ತಿಯ ಕೊರಳಿಗೇ ಹಾಕಿ ಈ ಹಾರದ ಕತೆಗೆ ಮಂಗಳ ಹಾಡಿದರು.
ಇದಿಷ್ಟೂ ನಡೆದದ್ದು ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರತಿಷ್ಠಾನ ಬುಧವಾರ ಸಂಜೆ ಗುರುನಾನಕ್ ಭವನದಲ್ಲಿ ಏರ್ಪಡಿಸಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ.
ಪುಸ್ತಕ ಬಿಡುಗಡೆ : ಈ ಸಂದರ್ಭದಲ್ಲಿ ಸರ್.ಎಂ. ವಿಶ್ವೇಶ್ವರಯ್ಯಾಸ್ ವರ್ಡ್ಸ್ ಆಫ್ ವಿಸ್ಡಂ ಪುಸ್ತಕವನ್ನು ಕೃಷ್ಣ ಬಿಡುಗಡೆ ಮಾಡಿದರು. ಸರ್ಎಂವಿ ಶಿಸ್ತಿನ ಸಿಪಾಯಿ, ದಕ್ಷ ಆಡಳಿತಗಾರ. ಕಾಯಕವೇ ಕೈಲಾಸ ಎಂದು ನಂಬಿದ್ದ ಶ್ರಮಜೀವಿ ಹಾಗೂ ಮಹಾನ್ ಮೇಧಾವಿ ಎಂದು ಬಣ್ಣಿಸಿದರು.
ಜವಹರಲಾಲ್ ನೆಹರೂ ಅವರಿಗೂ ಮೊದಲೇ ಭಾರತದಲ್ಲಿ ಯೋಜನೆಯ ಪರಿಕಲ್ಪನೆ ಮೂಡಿಸಿದವರು ಸರ್ಎಂವಿ, ಔದೋಗೀಕರಣಕ್ಕೆ ನಾಂದಿ ಹಾಡಿದವರೂ ಅವರೇ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ತಿಳಿಸಿದರು. ಪಂಚವಾರ್ಷಿಕ ಯೋಜನೆ ಅನುಷ್ಠಾನಕ್ಕೆ ಸರ್ಎಂವಿ ಅವರೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿ. ಮುನಿಯಪ್ಪ, ಬೆಂಗಳೂರು ವಿ.ವಿ. ಉಪಕುಲಪತಿ ಡಾ. ಎನ್.ಆರ್. ಶೆಟ್ಟಿ ಪಾಲ್ಗೊಂಡಿದ್ದರು.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...