ಮುಂದಿನ ಪರ್ಯಾಯ ಪೀಠಾಧೀಶರಾಗಿ ಶ್ರೀ ವಿದ್ಯಾಧೀಶ ತೀರ್ಥ
ಉಡುಪಿ : ಏಳುನೂರು ವರ್ಷಗಳಷ್ಟು ಹಳೆಯ ಉಡುಪಿ ಶ್ರೀ ಕೃಷ್ಣ ದೇವಾಲಯದ ಪರ್ಯಾಯ ಪೀಠದ ಮುಂದಿನ ಸ್ವಾಮಿಗಳಾಗಿ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಬರುವ ವರ್ಷ ಜನವರಿ 18ರಂದು ಗದ್ದುಗೆ ಏರಲಿದ್ದಾರೆ. ಈ ನಿಮಿತ್ತ ಬುಧವಾರ ಬಾಳೆ ಮುಹೂರ್ತ ಮತ್ತು ಅಕ್ಕಿ ಮುಹೂರ್ತದಲ್ಲಿ ಪರ್ಯಾಯ ಪೂರ್ವ ಸಮಾರಂಭಗಳು ನಡೆದವು.
ಪ್ರಸ್ತುತ 33ನೇ ಪರ್ಯಾಯ ಪೀಠಾಧೀಶರಾಗಿರುವ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ 2 ವರ್ಷದ ಅವಧಿ ಮುಂದಿನ ವರ್ಷ ಜನವರಿ 17ರಂದು ಮುಗಿಯಲಿದೆ. ಅದರ ಮರುದಿನ ಫಲಿಮಾರು ಮಠಾಧೀಶರನ್ನು ಪರ್ಯಾಯ ಮಠದ ಗದ್ದುಗೆ ಮೇಲೆ ಕೂರಿಸುವ ಮೂಲಕ 34ನೇ ಮಠಾಧೀಶರಾಗಿ ವಿಧ್ಯುಕ್ತವಾಗಿ ನಿಯೋಜಿಸಲಾಗುವುದು.
ಈ ನಿಮಿತ್ತ ಬುಧವಾರ ಫಲಿಮಾರು ಮಠಾಧೀಶರನ್ನು 51 ಮುಡಿಗಳಲ್ಲಿ 2000 ಕಿಲೋಗೂ ಹೆಚ್ಚು ಅಕ್ಕಿ ತುಂಬಿದ ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಇದಕ್ಕೂ ಮುನ್ನ ಫಲಿಮಾರು ಮಠದಲ್ಲಿ ಸಾಂಪ್ರದಾಯಿಕ ಪೂಜೆ ನಡೆಸಲಾಯಿತು. ಪೇಜಾವರ, ಅದಮಾರು, ಶಿರೂರು, ಕೃಷ್ಣಪುರ, ಕಾಣಯೂರು ಮಠಗಳೂ ಸೇರಿದಂತೆ ಅಷ್ಟ ಮಠಗಳ ಮಠಾಧೀಶರು ಮುಂದಿನ ಪರ್ಯಾಯ ಸ್ವಾಮೀಜಿಗಳಿಗೆ ಸಹಕಾರ ಸೂಚಿಸಿದರು.
ಫಲಿಮಾರು ಮಠ ಆಧ್ಯಾತ್ಮಿಕ ಕೃತಿಗಳ ಕಣಜ : ಕನ್ನಡ ಹಾಗೂ ಸಂಸ್ಕೃತ ಪಂಡಿತ ಹಾಗೂ ಕವಿ ಬನ್ನಂಜೆ ಗೋವಿಂದಾಚಾರ್ಯ ಸಮಾರಂಭದಲ್ಲಿ ಮಾತನಾಡಿ, ಅಷ್ಟಮಠಗಳ ಪೈಕಿ ಫಲಿಮಾರು ಮಠ ಆರ್ಥಿಕವಾಗಿ ಬಡವಾಗಿದೆ. ಆದರೆ ಆಧ್ಯಾತ್ಮಿಕವಾಗಿ ಅದು ಸಂಪದ್ಭರಿತವಾಗಿದ್ದು, ಮಾಧ್ವ ತತ್ತ್ವಗಳ ಸಾಕಷ್ಟು ಬರಹಗಳು ಅಲ್ಲಿ ಸಂರಕ್ಷಿತವಾಗಿವೆ. ಶ್ರೀ ಹರಿಕೇಶ ತೀರ್ಥ ಸ್ವಾಮೀಜಿ ವಿರಚಿತ ಅಪರೂಪದ ಹಾಗೂ ಬೆಲೆ ಬಾಳುವ ಸರ್ವ ಮೂಲ ಗ್ರಂಥದ ಮೂಲ ಪ್ರತಿ ಫಲಿಮಾರು ಮಠದಲ್ಲಿ ಸುರಕ್ಷಿತವಾಗಿದೆ ಎಂದು ಶ್ಲಾಘಿಸಿದರು.
(ಯುಎನ್ಐ)