ಶುಚಿಯಾಗಿ ಹಂದಿ ಸಾಕಬೇಕಂದ್ರೆಹಂದಿ ಸಾಕಾಣಿಕ ನಿಗಮ ಸ್ಥಾಪಿಸಿ
ಬೆಂಗಳೂರು : ಹಂದಿ ಜೋಗಿ ಜನಾಂಗದ ರಾಜ್ಯ ಮಟ್ಟದ ಮೊದಲ ಸಮಾವೇಶ ಫೆಬ್ರವರಿ 10ರಂದು ರಾಜಾಜಿ ನಗರದ ರಾಮಮಂದಿರ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ಹಂದಿ ಜೋಗಿ ಸಂಘದ ಅಧ್ಯಕ್ಷ ಬಿ. ಗೋವಿಂದರಾಜು ಹೇಳಿದ್ದಾರೆ.
ಹಂದಿ ಜೋಗಿ ಜನಾಂಗದವರು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಅಲೆಮಾರಿ ಜೀವನ ಮಾಡಿಕೊಂಡಿದ್ದು, ಆವರನ್ನು ಒಂದು ವೇದಿಕೆಯಡಿ ತರುವ ಪ್ರಯತ್ನವಾಗಿ ಈ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಹಂದಿ ಜೋಗಿ ಜನಾಂಗವರನ್ನು ಪಟ್ಟಣಗಳಲ್ಲಿ ವಾಸಿಸಲು ಬಿಡುತ್ತಿಲ್ಲ. ಹಂದಿಗಳನ್ನು ಸಾಕುವುದರಿಂದ ಪರಿಸರ ಶುಚಿಯಾಗಿರುವುದಿಲ್ಲ ಎಂಬ ಕಾರಣಕ್ಕೆ ಊರಿನಿಂದ ಹೊರಗೆ ವಾಸಿಸುವಂತೆ ಮಾಡಿ ಅವರನ್ನು ಸಮಾಜವಾಹಿನಿಯಿಂದ ದೂರ ಇಡಲಾಗುತ್ತಿದೆ. ಈ ಕಾರಣಕ್ಕೆ ಹಂದಿ ಜೋಗಿ ಜನಾಂಗದ ಮಕ್ಕಳು ವಿದ್ಯಾಭ್ಯಾಸದಿಂದಲೂ ವಂಚಿತರಾಗಿದ್ದಾರೆ ಎಂದು ಗೋವಿಂದರಾಜು ಹೇಳಿದರು.
ಪ್ರಸ್ತುತ ಆಯೋಜಿಸಲಾಗಿರುವ ಸಮಾವೇಶದ ಮೂಲಕ, ಹಂದಿ ಜೋಗಿ ಜನಾಂಗದವರಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪ್ರಾಶಸ್ತ್ಯ ನೀಡುವಂತೆ ಮತ್ತು ಹಂದಿ ಸಾಕಾಣಿಕಾ ನಿಗಮವೊಂದನ್ನು ಸ್ಥಾಪಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು. ಸಮಾವೇಶವನ್ನು ಫೆಬ್ರವರಿ 10ರಂದು ಮುಖ್ಯ ಮಂತ್ರಿ ಎಸ್. ಎಂ. ಕೃಷ್ಣ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಅನಂತ ಕುಮಾರ್ ಮತ್ತಿತರ ಸಚಿವರು ಭಾಗವಹಿಸಲಿದ್ದಾರೆ.
(ಇನ್ಫೋ ವಾರ್ತೆ)