ಕಾಡುಗಳ್ಳ ವೀರಪ್ಪನ್ ತನ್ನ ದೊಡ್ಡ ಮೀಸೆ ಬೋಳಿಸಿದ್ದಾನೆಯೇ?
* ನಾಗೇಂದ್ರ ಪ್ರಸಾದ್, ನಂಜನಗೂಡು
ಚಾಮರಾಜನಗರ : ಕಳೆದ ಶುಕ್ರವಾರದಿಂದ ವೀರಪ್ಪನ್ ವಿರುದ್ಧದ ಎಸ್.ಟಿ.ಎಫ್. ಕಾರ್ಯಾಚರಣೆ ಏಕಾಏಕಿ ಚುರುಕಾಗಿದೆ. ಹತ್ತು ವರ್ಷಗಳಿಂದಲೂ ತಮಿಳುನಾಡು ಹಾಗೂ ಕರ್ನಾಟಕದ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಿರುವ ನರಹಂತಕನನ್ನು ಹತ್ತೇ ದಿನದಲ್ಲಿ ಹಿಡಿಯುವ ಉತ್ಸಾಹ ಕಂಡು ಬಂದಿದೆ.
ಇದೇನು ಆರಂಭ ಶೂರತ್ವವೋ ಇಲ್ಲ ನಿಜವಾಗಿಯೂ ಈ ಬಾರಿಯ ಕಾರ್ಯಾಚರಣೆ ಯಶಸ್ವಿಯಾಗೇ ತೀರುತ್ತದೆಯೋ ಎಂಬುದನ್ನು ಕಾದೇ ನೋಡಬೇಕು. ಈ ಮಧ್ಯೆ ರಾಜ್ ಅಪಹರಣ ಸಂದರ್ಭದಲ್ಲಿ ನಾಲ್ಕಾರು ಬಾರಿ ಸಂಧಾನ ನಡೆಸಿ, ಬರಿಗೈಲಿ ಹಿಂತಿರುಗಿದ ನಕ್ಕೀರನ್ ಗೋಪಾಲ್, ವೀರಪ್ಪನ್ ಕಾಡಿನಲ್ಲಿ ಇಲ್ಲವೇ ಇಲ್ಲ. ಆತ ತಪ್ಪಿಸಿಕೊಂಡಿದ್ದಾನೆ ಎಂದು ತಮಗೆ ಅನ್ನಿಸುತ್ತದೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.
ಸುಸಿ ಮಲೈ ಅರಣ್ಯ ಪ್ರದೇಶದಲ್ಲಿ ಮತ್ತೆ ಸೋಮವಾರ ವೀರಪ್ಪನ್ ತಂಡದ ಜತೆ ಎಸ್ಟಿಎಫ್ ಹೋರಾಟ ನಡೆಸಿದೆ. ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಎಸ್ಟಿಎಫ್ ಹಾಗೂ ವೀರಪ್ಪನ್ ತಂಡದ ಜತೆ ಗುಂಡಿನ ವಿನಿಮಯ ನಡೆದಿದೆ ಎಂದು ಇಲ್ಲಿಗೆ ತಲುಪಿರುವ ಸುದ್ದಿಗಳು ಹೇಳುತ್ತಿವೆ. ಎಸ್.ಟಿ.ಎಫ್ ಮೂಲಗಳೂ ಇದನ್ನು ಖಚಿತಪಡಿಸಿವೆ.
ವೀರಪ್ಪನ್ಗೆ ಗುಂಡಿನೇಟು : ಶುಕ್ರವಾರದಿಂದಲೂ ಸತತವಾಗಿ ನಡೆಯುತ್ತಿರುವ ದಾಳಿಯಲ್ಲಿ ವೀರಪ್ಪನ್ ಗಾಯಗೊಂಡಿದ್ದಾನೆ ಎಂಬ ಗುಮಾನಿಯೂ ಇದೆ. ತನ್ನ ತಂಡದೊಂದಿಗೆ ತಪ್ಪಿಸಿಕೊಳ್ಳು ವೀರಪ್ಪನ್ ತರಿಸಿಕೊಂಡಿದ್ದ ಎನ್ನಲಾದ ಹೈಟೆಕ್ ಕಾರು ಹಾಗೂ ಅದರಲ್ಲಿದ್ದ ಸಂದೇಶದ ಪತ್ರವೊಂದನ್ನು ಪೊಲೀಸರು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾಡಿನಂಚಿನ ರಸ್ತೆಯ ಮೂಲಕ ವೀರಪ್ಪನ್ ಬಸ್ನಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ.
ವೇಷ ಬದಲಿಸಿರುವ ಶಂಕೆ : ಈ ಹಿನ್ನೆಲೆಯಲ್ಲಿ ಎಸ್.ಟಿ.ಎಫ್. ವಾಳಿಯಾರ್ - ಸಿರುವಾಣಿ ಅರಣ್ಯ ಪ್ರದೇಶದ ರಸ್ತೆಗಳ ಮೇಲೂ ತೀವ್ರ ನಿಗಾ ಇಟ್ಟಿದ್ದಾರೆ. ವೀರಪ್ಪನ್ ತನ್ನ ಗುರುತು ಸಿಗದಂತೆ ತನ್ನ ದೊಡ್ಡ ಗಾತ್ರದ ಗಿರಿಜಾ ಮೀಸೆಯನ್ನು ಬೋಳಿಸಿ, ಸದಾ ತಾನು ಧರಿಸುತ್ತಿದ್ದ ಕಮಾಂಡೋ ವಸ್ತ್ರದ ಬದಲು ಸಾಮಾನ್ಯ ನಾಗರಿಕನಂತೆ ವೇಷ ತೊಟ್ಟಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.
ಈಗಾಗಲೇ ಬಂಧಿಸಿರುವ ಇಬ್ಬರು ಶಂಕಿತ ವೀರಪ್ಪನ್ ಸಹಚರರ ವಿಚಾರಣೆ ನಡೆಯುತ್ತಿದ್ದು, ಗುಂಡಿನ ದಾಳಿಯ ಸಂದರ್ಭದಲ್ಲಿ ದಿಕ್ಕಾಪಾಲಾಗಿ ಓಡಿದ ತಂಡ ಬಿಟ್ಟು ಹೋದ ಡೈರಿ, ಮೊಬೈಲ್ ಫೋನ್ನಿಂದ ಸಾಕಷ್ಟು ಸುಳಿವು ಸಿಕ್ಕಿದೆ ಎಂದೂ ಮೂಲಗಳ ತಿಳಿಸಿವೆ.
ವಾರಗಟ್ಟಲೇ ಊಟ ವಿಲ್ಲದೆಯೂ ನಿಶ್ಶಕ್ತರಾಗದಂತೆ ಕಾಪಾಡುವ ಸ್ಟೆರಾಯ್ಡ್ ಮಾದರಿಯ ವಿಟಮಿನ್ ಮಾತ್ರೆಗಳು, ರಕ್ತದೊತ್ತಡ, ಮಧುಮೇಹವೇ ಮೊದಲಾದ ಕಾಯಿಲೆಗಳಿಗೆ ಸೇವಿಸುವ ಔಷಧ, ಕೈಚೀಲಗಳೂ ಪೊಲೀಸರಿಗೆ ದೊರೆತಿವೆ. ಈ ಚೀಲದಲ್ಲಿ ಕೋತಿಯ ಕೈ - ಕಾಲುಗಳು ಇದ್ದು, ವೀರಪ್ಪನ್ ಕೋತಿಯ ಮಾಂಸ ತಿನ್ನಲು ಇದನ್ನು ಇಟ್ಟುಕೊಂಡಿರಬಹುದು ಎಂದೂ ಹೇಳಲಾಗಿದೆ.
ಶೆಟ್ಟರ್ ಆಗ್ರಹ : ವೀರಪ್ಪನ್ನ ತಂಡ ಬಿಟ್ಟು ಹೋಗಿರುವ ಡೈರಿ ಸಿಕ್ಕಿದೆ ಎಂಬ ಹಿನ್ನೆಲೆಯಲ್ಲಿ, ವೀರಪ್ಪನ್ನೊಂದಿಗೆ ಇರಬಹುದಾದ ಗಣ್ಯರ ಸಂಪರ್ಕದ ಬಗ್ಗೆ ಸಿ.ಬಿ.ಐ. ತನಿಖೆ ನಡೆಸುವಂತೆ ಬಿ.ಜೆ.ಪಿ. ಮುಖಂಡ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ