ಜಲಸಂವರ್ಧನೆ ಯೋಜನೆಯಡಿ 25 ಸಾವಿರ ಕೆರೆಗಳ ಪುನಶ್ಚೇತನ
ತುಮಕೂರು : ಅಂತರ್ಜಲ ಮಟ್ಟ ಕಾಪಾಡಲು ಹಾಗೂ ನೀರಿನ ಬವಣೆ ನೀಗಿಸಲು ಜಲಸಂವರ್ಧನೆ ಯೋಜನೆ ಅಡಿಯಲ್ಲಿ 25 ಸಾವಿರ ಕೆರೆಗಳನ್ನು ಪುನಶ್ಚೇತನಗೊಳಿಸಲು ವಿಶ್ವಬ್ಯಾಂಕ್ ಒಂದು ಸಾವಿರ ಕೋಟಿ ರು. ನೆರವು ನೀಡಲು ಸಮ್ಮತಿ ನೀಡಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಸೋಮವಾರ ಜಿಲ್ಲೆಯ ಸುಮಾರು 80 ಗ್ರಾಮಗಳಿಗೆ ಆಶಾಕಿರಣವಾದ 66 ಕೆ.ವಿ. ವಿದ್ಯುತ್ ಉಪಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಮಾತನಾಡುತ್ತಿದ್ದ ಅವರು, ನಮ್ಮ ಪೂರ್ವಜರು ನಿರ್ಮಿಸಿದ ಕೆರೆಗಳನ್ನು ಸಂರಕ್ಷಿಸುವ ಸಲುವಾಗಿ ಜಲಸಂವರ್ಧನೆ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು.
ವಿಶ್ವಬ್ಯಾಂಕ್ ನೀಡುವ ನೆರವಿನಲ್ಲಿ ಈಗ ಆಯ್ದ 25 ಸಾವಿರ ಕೆರೆಗಳ ಪುನಶ್ಚೇತನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಹಾಲಿ ರಾಜ್ಯದಲ್ಲಿ 50 ಸಾವಿರ ಕೆರೆಗಳನ್ನು ಗುರುತಿಸಲಾಗಿದೆ ಎಂದರು. ಈ ಕೆರೆಗಳ ನೀರಿನ ನಿರ್ವಹಣೆಗೆ ನೀರು ಬಳಕೆದಾರರ ಸಂಘ ಸ್ಥಾಪಿಸಿ ಸಂಪೂರ್ಣ ಮೇಲ್ವಿಚಾರಣೆಯನ್ನು ಕೆರೆಗಳ ನೀರಿನ ಫಲಾನುಭವಿಗಳಿಗೆ ವಹಿಸಲಾಗುವುದು ಇದಕ್ಕೂ ವಿಶ್ವಬ್ಯಾಂಕ್ ಒಪ್ಪಿಗೆ ನೀಡಿದೆ ಎಂದರು.
ನಬಾರ್ಡ್ ನೆರವು : ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ನಬಾರ್ಡ್ನಿಂದ 1200 ಕೋಟಿ ರುಪಾಯಿ ಸಾಲ ತರುತ್ತಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿ ಕಾರ್ಯ ನೆರವೇರಲಿದೆ. ತೀವ್ರ ನಷ್ಟ ಅನುಭವಿಸುತ್ತಿರುವ ವಿದ್ಯುತ್ ಪ್ರಸರಣ ನಿಗಮವನ್ನು ಮೇಲೆತ್ತಲೂ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಕೃಷ್ಣ ತಿಳಿಸಿದರು.