ಮೈಲಾರ ಲಿಂಗೇಶ್ವರ ಜಾತ್ರೆ ನಿಮಿತ್ತ ವಿಶೇಷ ಬಸ್ ಸೌಕರ್ಯ
ದಾವಣಗೆರೆ : ಇಲ್ಲಿಗೆ ಸಮೀಪದ ಮೈಲಾರದಲ್ಲಿ ಫೆಬ್ರವರಿ 8ರಿಂದ 12ರವರೆಗೆ ನಡೆಯಲಿರುವ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆ ಪ್ರಯುಕ್ತ ದಾವಣಗೆರೆ ಜಿಲ್ಲೆ ಹಾಗೂ ಇನ್ನಿತರ ಪ್ರಮುಖ ಪಟ್ಟಣಗಳಿಂದ ನೂರಕ್ಕೂ ಹೆಚ್ಚು ವಿಶೇಷ ಬಸ್ಗಳನ್ನು ಓಡಿಸಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಈ ಸಂಬಂಧ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜಿ. ತೆಂಬದ್. ಭಕ್ತಾದಿಗಳ ಅನುಕೂಲಕ್ಕಾಗಿ ಹಾಗೂ ಅಗತ್ಯಕ್ಕನುಗುಣವಾಗಿ ನೂರರಿಂದ ನೂರಿಪ್ಪತ್ತು ಕೆಎಸ್ಸಾರ್ಟಿಸಿ ಬಸ್ಗಳನ್ನು ಓಡಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಮೈಲಾರ ಲಿಂಗೇಶ್ವರನ ಜಾತ್ರೆಗೆ ಸಾಮಾನ್ಯವಾಗಿ ಜಿಲ್ಲೆಯಿಂದ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗುತ್ತಾರೆ. ಬಸ್ ಸೌಕರ್ಯವಿಲ್ಲದ ಕಾರಣ ಅವರು ರಹದಾರಿ ಇಲ್ಲದ ಬಸ್ಸು, ಲಾರಿ, ವ್ಯಾನ್ಗಳನ್ನು ಆಶ್ರಯಿಸುತ್ತಿದ್ದರು. ಇದರಿಂದ ಪ್ರಯಾಣಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಮನಗಂಡು ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಜಿಲ್ಲೆಯ ಹರಿಹರ, ಹರಪನಹಳ್ಳಿ, ಜಗಳೂರು ಹಾಗೂ ಇನ್ನಿತರ ಕಡೆಗಳಿಂದ ಮೈಲಾರ ಲಿಂಗೇಶ್ವರ ಜಾತ್ರೆ ವಿಶೇಷ ಬಸ್ಗಳು ಸಂಚರಿಸಲಿವೆ. ಈ ಸೌಲಭ್ಯದ ಪ್ರಯೋಜನ ಪಡೆಯುವಂತೆ ಅವರು ಕೋರಿದ್ದಾರೆ.