ಮಂಗಳೂರಿನಲ್ಲಿ ರಾಜ್ಯ ಸರಕಾರಿ ವೈದ್ಯರ ಸ್ನೇಹ ಮಿಲನ
ಮಂಗಳೂರು : ಮಂಗಳೂರಿನಲ್ಲಿ ಇನ್ನೊಂದು ರಾಜ್ಯ ಮಟ್ಟದ ಸಮಾವೇಶ. ಈ ಬಾರಿ ರಾಜ್ಯ ಸರಕಾರಿ ವೈದ್ಯರ ಸರದಿ. ಫೆಬ್ರವರಿ 10 ಮತ್ತು 11ರಂದು ರಾಜ್ಯ ಸರಕಾರಿ ವೈದ್ಯರ ಸ್ನೇಹ ಮಿಲನ ಮತ್ತು ವೈದ್ಯರ ಸಂಘದ ಬೆಳ್ಳಿ ಹಬ್ಬ ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆಯಲಿದೆ.
ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಿಂದ ಸುಮಾರು 1,500 ಮಂದಿ ವೈದ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹನ್ನೊಂದು ಮಂದಿ ವೈದ್ಯರಿಗೆ ವೈದ್ಯಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ , ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಎ.ಪಿ. ಮೂರ್ತಿ ಸೋಮವಾರದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯದೆ ಇರುವುದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಆದ್ದರಿಂದ ಖಾಲಿ ಹುದ್ದೆಗಳಿಗೆ ನೇಮಕಾತಿ ಮತ್ತು ವೈದ್ಯರ ಕಾಲ ಮಿತಿ ಬಡ್ತಿಯ ವಿಚಾರಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಮೂರ್ತಿ ಹೇಳಿದರು.
ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಎ.ಬಿ. ಮಾಲಕರೆಡ್ಡಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಗಮ ಎಂಬ ಸ್ಮರಣ ಸಂಚಿಕೆಯನ್ನು ಕೇಂದ್ರ ಜವಳಿ ಸಚಿವ ವಿ. ಧನಂಜಯ ಕುಮಾರ್ ಬಿಡುಗಡೆ ಮಾಡುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮೋಟಮ್ಮ ಸಂಘದ ಸ್ಮರಣಿಕೆ ಮತ್ತು ಬೆಳ್ಳಿ ಹಬ್ಬದ ಲಾಂಛನವನ್ನು ಬಿಡುಗಡೆ ಮಾಡುವರು.
(ಇನ್ಫೋ ವಾರ್ತೆ)