ವೀರಪ್ಪನ್ ತಂಡದ ಜತೆ ಮತ್ತೊಮ್ಮೆ ಗುಂಡಿನ ಚಕಮಕಿ
ಬೆಂಗಳೂರು : ಶನಿವಾರ ಮಧ್ಯರಾತ್ರಿ ಹಾಗೂ ಭಾನುವಾರ ಬೆಳಗಿನ ಜಾವ ವೀರಪ್ಪನ್ ತಂಡದ ಜತೆ ಮತ್ತೊಮ್ಮೆ ಗುಂಡಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಚಕಮಕಿ ನಡೆದದ್ದು ನಿಜ. ಎಸ್.ಟಿ.ಎಫ್ ಮೂಲಗಳು ಈ ಸುದ್ದಿಯನ್ನು ನಿರಾಕರಿಸುತ್ತಿವೆ.
ತೀವ್ರಗೊಂಡ ಪೊಲೀಸ್ ಕಾರ್ಯಾಚರಣೆಯಿಂದ ಧೃತಿಗೆಟ್ಟು ಕೇರಳ ಕಾಡು ಸೇರಿರುವನೆನ್ನಲಾದ ವೀರಪ್ಪನ್ ಹಾಗೂ ಆತನ 9 ಮಂದಿ ಸಹಚರರನ್ನು ತಮಿಳುನಾಡು - ಕೇರಳ ಗಡಿಯ ಕಾನನ ಪ್ರದೇಶದಲ್ಲಿ ಕಂಡ ಪೊಲೀಸರು ಆ ತಂಡದ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಪ್ರತಿಯಾಗಿ ವೀರಪ್ಪನ್ ತಂಡವೂ ಗುಂಡು ಹಾರಿಸಿತು ಎಂದು ಗೊತ್ತಾಗಿದೆ.
ಆದರೆ, ಯಾವ ನಿರ್ದಿಷ್ಟ ಪ್ರದೇಶದಲ್ಲಿ ಈ ಗುಂಡಿನ ಕಾಳಗ ನಡೆದಿದೆ ಎಂಬುದು ಗೊತ್ತಾಗಿಲ್ಲ. ಭಾನುವಾರ ಬೆಳಗಿನ ಜಾವ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಪೊಲೀಸ್ ಹಾಗೂ ವೀರಪ್ಪನ್ ತಂಡದ ನಡುವೆ ಗುಂಡಿನ ವಿನಿಮಯ ನಡೆದಿದೆ. ವೀರಪ್ಪನ್ ಹಾಗೂ ಆತನ ಸಹಚರರು ಕೇರಳ ಕಾಡಿನಲ್ಲೇ ಇರುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಕೂಸು ಮಲೈ, ಶಿನ್ನಂಬೂದಿ, ಶೆಂಬೂಮ್ಬುದಿ ಅರಣ್ಯ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ ಕ್ಷಿಪ್ರಗತಿಯಲ್ಲಿ ಬಿರುಸಿನಿಂದ ನಡೆಯುತ್ತಿದೆ.
ಕ್ಯಾಮರಾ, ಡೈರಿ ಪತ್ತೆ : ಶನಿವಾರ ರಾತ್ರಿ ಹಾಗೂ ಭಾನುವಾರದ ದಾಳಿಯಿಂದ ಮತ್ತೊಬ್ಬ ವೀರಪ್ಪನ್ ಸಹಚರ ಗಾಯಗೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಶುಕ್ರವಾರದ ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಪೊಲರೈಡ್ ಕ್ಯಾಮರಾ ಹಾಗೂ ಡೈರಿ ದೊರೆತಿದೆ. ಡೈರಿಯಲ್ಲಿ ಡಾ. ರಾಜ್ಕುಮಾರ್ ಹಾಗೂ ಅವರ ಪುತ್ರರ ದೂರವಾಣಿ ಸಂಖ್ಯೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಹಚರನ ಬಂಧನ : ಈ ಮಧ್ಯೆ ವೆಳ್ಳಿಯೂರು ಅರಣ್ಯ ಪ್ರದೇಶದಲ್ಲಿ 32 ಲಕ್ಷ ರುಪಾಯಿ ಮೌಲ್ಯದ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜಂಟಿ ಕಾರ್ಯಪಡೆ ಬಂಧಿಸಿರುವ ಈ ವ್ಯಕ್ತಿ ವೀರಪ್ಪನ್ ಸಹಚರರಲ್ಲಿ ಒಬ್ಬ ಎಂದು ಶಂಕಿಸಲಾಗಿದೆ. ಬಂಧಿತನಿಂದ 15 ಸಾವಿರ ರುಪಾಯಿ ನಗದು, ಚಾಕು, ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ