ವೀರಪ್ಪನ್ ಕಾಡಿನಿಂದ ನಾಡಿಗೆ ಕಾರಿನಲ್ಲಿ ಪರಾರಿಯಾಗಲು ಬಯಸಿದ್ದನೇ ?
ಕೊಯಮತ್ತೂರು : ನಿರಕ್ಷರ ಕುಕ್ಷಿ, ಹಣ ಎಣಿಸಲು ಬಾರದವ ಎಂದೆಲ್ಲಾ ಮಾಧ್ಯಮಗಳಲ್ಲಿ ಬಿಂಬಿತನಾಗಿದ್ದ ಕಾಡುಗಳ್ಳ ವೀರಪ್ಪನ್ ಆಧುನಿಕ ತಂತ್ರಜ್ಞಾನದ ಇಂಚಿಂಚೂ ಅರಿತ ಹೈಟೆಕ್ ಕಳ್ಳನಾಗಿದ್ದಾನೆಯೇ ? ಹೌದೆಂದು ನಿರೂಪಿಸುವಂಥ ಸುದ್ದಿಗಳು ಈಚೆಗೆ ಹೊಮ್ಮುತ್ತಿವೆ...
ವೆಳ್ಳಿಯಾರ್ ಕಾಡಿನ ಹತ್ತಿರದಲ್ಲಿರುವ ಕಾಗದದ ಕಾರ್ಖಾನೆ ಹತ್ತಿರ ಪೊಲೀಸರಿಗೆ ಕಾರೊಂದು ಸಿಕ್ಕಿದ್ದು, ಇದು ವೀರಪ್ಪನ್ಗೆ ಸೇರಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಂಬರ್ ಪ್ಲೇಟು ಇರದಿದ್ದ ಈ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಬ್ಬೇಪಾರಿಯಂತೆ ನಿಂತಿತ್ತು. ನಂಬರ್ ಪ್ಲೇಟಿನ ಮುರುಕೊಂದು ಪೊಲೀಸರ ಕೈಗೆ ಸಿಕ್ಕಿದ್ದು, ಅದರಲ್ಲಿ ಕೇರಳ ನೋಂದಣಿಯ ಮಾಹಿತಿ ಸಿಕ್ಕಿದೆ. ಭಾನುವಾರ ಸಂಜೆ ಪೊಲೀಸರಿಗೆ ಈ ಕಾರು ಸಿಕ್ಕಿದೆ.
ಎಸ್ಟಿಎಫ್ ಪೊಲೀಸರಿಂದ ಹಾಗೂ ಹೀಗೂ ಮಾಡಿ ತಪ್ಪಿಸಿಕೊಂಡು ಕಾಡಿನಿಂದ ಹೊರ ಬಂದು, ಬೇರೆಡೆಗೆ ತೆರಳಲು ಅನುಕೂಲವಾಗಲಿ ಎಂದು ಈ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಅದರಲ್ಲಿ ಬಾಂಬು ವಗೈರೆ ಇಡಲಾಗಿದೆಯೇ ಎಬುದನ್ನು ಪರಿಶೀಲಿಸಿದ ನಂತರ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆರಳಚ್ಚು ತಜ್ಞರು ತಮ್ಮ ಪರಿಶೀಲನಾ ಕಾರ್ಯ ಮುಗಿಸಿದ್ದಾರೆ.
ತಮಿಳುನಾಡು ಹಾಗೂ ಕೇರಳದ ಸಿರುವಾಣಿ, ಅಲಂದುರೈ, ಚಿನ್ನಂಪಾಡಿ ಹಾಗೂ ವೆಳ್ಳಿಯಾರ್ ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ಜನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಅನಿರೀಕ್ಷಿತವಾಗಿ ಪ್ರಥಮ ಬಾರಿಗೆ ಕಣ್ಣಿಗೆ ಬಿದ್ದಿರುವ ವೀರಪ್ಪನ್ ಹಾಗೂ ತಂಡವನ್ನು ಮಟ್ಟ ಹಾಕುವ ಠರಾವು ಮಾಡಿರುವ ಎಸ್ಟಿಎಫ್ ಆ ನಿಟ್ಟಿನಲ್ಲಿ ಶತಾಯ ಗತಾಯ ಯತ್ನಿಸುತ್ತಿದೆ. ಕೊಯಮತ್ತೂರು, ಪಾಲಕ್ಕಡ್ ಮೊದಲಾದ ಜಾಗೆಗಳನ್ನು ಸಂಪರ್ಕಿಸುವ ಈ ಕಾಡಿನ ಪ್ರದೇಶಗಳಲ್ಲಿ ಸಂಚರಿಸುವ ವಾಹನಗಳನ್ನು ದಿನದ ಇಪ್ಪತ್ತನಾಲ್ಕೂ ಗಂಟೆ ಪರಿಶೀಲಿಸಿಯೇ ಮುಂದುವರೆಯಲು ಬಿಡಲಾಗುತ್ತಿದೆ.
ಕೇರಳ ಅರಣ್ಯದ ತುಂಬಾ ಎಸ್ಟಿಎಫ್ ಅಬ್ಬರ ತೀವ್ರವಾಗ್ದಿದು, ಯಾವುದೇ ಕ್ಷಣದಲ್ಲಿ ವೀರಪ್ಪನ್ ಜುಟ್ಟು ಕೈಗೆ ಸಿಗಬಹುದು ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲಾಯಿತು, ಡೈರಿ ಆಯಿತು. ಈಗೊಂದು ಕಾರು. ವದಂತಿ, ಗುಮಾನಿ, ಪುಕಾರುಗಳ ಗುಲ್ಲಿನಲ್ಲಿ ವಾಸ್ತವಾಂಶ ಯಾವುದು ಎಂಬುದೇ ಬಯಲಿಗೆ ಬರುತ್ತಿಲ್ಲ ಅನ್ನೋದೂ ವೀರಪ್ಪನ್ ವಿಷಯದಲ್ಲಿ ನಿಜವಾಗುತ್ತಿದೆ. ಒಂದು ವೇಳೆ ಪೊಲೀಸರ ಪ್ರಿಡಿಕ್ಷನ್ ಹಕೀಕತ್ತಾದರೆ ? ಹ್ಯಾಟ್ಸಾಫ್ ಎಸ್ಟಿಎಫ್.
(ಪಿಟಿಐ)
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ