ಚರ್ಚು-ಮಸೀದಿಗಳಿಂದ ಮಂದಿ-ರಗಳು ಶುಚಿತ್ವ ಕಲಿಯಲಿ : ಕೃಷ್ಣ
ಬೆಂಗಳೂರು : ನಗರದ ಕಸವನ್ನೆಲ್ಲಾ ಮಟಾಮಾಯ ಮಾಡುವಂತೆ ಒಂದು ತಿಂಗಳ ಗಡುವನ್ನು ಕೊಟ್ಟ ಮುಖ್ಯಮಂತ್ರಿ ಕೃಷ್ಣ , ಆ ಗಡುವು ಮುಗಿದ ನಂತರವೂ ಶುಚಿತ್ವದ ಬಗ್ಗೆ ಮುಫತ್ತಾಗಿ ಮುತ್ತುದುರಿಸುತ್ತಿದ್ದಾರೆ. ಆದರೆ ಅವರ ಆದೇಶ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದು, ಕೊಳೆತು ನಾರುತ್ತಿರುವ ಕಸದ ತೊಟ್ಟಿಗಳ ತೊಳೆಯೋ ಕೆಲಸ ಮಾತ್ರ ನಡೆದಿಲ್ಲ. ಈಗ ನಮ್ಮ ಮುಖ್ಯಮಂತ್ರಿಗಳು ಕಸದ ತೊಟ್ಟಿ ಬಿಟ್ಟು ದೇವಸ್ಥಾನದ ಶುಚಿತ್ವದ ಬಗ್ಗೆ ಮಾತನಾಡಿದ್ದಾರೆ....
ಮಲ್ಲೇಶ್ವರಂ ಬಡಾವಣೆಯ 11ನೇ ಕ್ರಾಸಿನಲ್ಲಿ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ. ಭಾನುವಾರ ಇಲ್ಲಿ ಜನವೋ ಜನ. ಹೊಸದಾಗಿ ಕಟ್ಟಿರುವ ಪ್ರವಚನ ಮಂದಿರ ನಳನಳಿಸುತ್ತಿತ್ತು . ಆದರೆ ಎಲ್ಲೆಂದರಲ್ಲಿ ಪ್ರಸಾದ, ಎಣ್ಣೆಯ ಕಮಟು, ಕೈತೊಳೆಯುವ ನೀರು ಸರಿಯಾಗಿ ಹರಿದು ಹೋಗದೆ ತೊಂದರೆ ಕೊಡುತ್ತಿದ್ದುದು... ಸಾಮಾನ್ಯವಾಗಿ ಜನ ಅತಿಯಾಗಿ ಭಕ್ತಿ ಹರಿಸುವ ದೇವಾಲಯಗಳಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯಗಳು ಇಲ್ಲೂ ಇದ್ದವು. ಪ್ರವಚನ ಮಂದಿರ ಉದ್ಘಾಟಿಸಲು ಬಂದ ಮುಖ್ಯಮಂತ್ರಿ ಕೃಷ್ಣ ಮೂಗಿಗೂ ಇದು ಬಡಿದದ್ದೇ ತಡ, ತಮ್ಮ ಎಂದಿನ ಶೈಲಿಯಲ್ಲಿ ಕೃಷ್ಣ ಭಾಷಣ ಶುರುವಿಟ್ಟರು -
ದೇವಸ್ಥಾನಗಳು ಗಲೀಜಿನ ಕೊಂಪೆಗಳಾಗಿವೆ. ಬರೇ ದೇವಸ್ಥಾನಗಳನ್ನು ಕಟ್ಟಿದರಷ್ಟೇ ಸಾಲದು. ಅವುಗಳ ಬೇಕು- ಬೇಡ, ಶುಚಿ- ಸುಣ್ಣಗಳಿಗೂ ಗಮನ ಹರಿಸೋದು ಅತಿ ಮುಖ್ಯ. ಭಕ್ತಿ ಹುಟ್ಟಿಸಲು ಸ್ವಚ್ಛ ಪರಿಸರ ಅತಿ ಮುಖ್ಯ. ಶ್ವಪಚತನ ಇರುವ ಪರಿಸರದಲ್ಲಿ ಹುಟ್ಟುವ ಭಕ್ತಿ ಅರ್ಥ ರಹಿತವಾದುದು. ಚರ್ಚ್ ಹಾಗೂ ಮಸೀದಿಗಳಿಂದ ನಾವು ಸ್ವಚ್ಛತೆಯ ಪಾಠ ಕಲಿಯಬೇಕು.
ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡುವುದು ಕೇವಲ ಸರ್ಕಾರ ಅಥವಾ ಪಾಲಿಕೆಯಿಂದ ಸಾಧ್ಯವಿಲ್ಲ. ಜನ ಹಾಗೂ ಸಂಘ- ಸಂಸ್ಥೆಗಳೂ ಇದಕ್ಕೆ ಸಹಕಾರ ನೀಡಬೇಕು ಎಂದು ಕೃಷ್ಣ ನಿಗದಿತ ಗಡುವಿನಲ್ಲಿ ಕಸ ತೊಳೆಯದ್ದಕ್ಕೆ ಪರೋಕ್ಷವಾಗಿ ಸಬೂಬು ಕೊಟ್ಟರು.
ಇಷ್ಟೆಲ್ಲಾ ಹೇಳಿದ ಮುಖ್ಯಮಂತ್ರಿಗಳು, ದೇವಸ್ಥಾನದಲ್ಲಿ ಶುಚಿತ್ವ ಸ್ಥಾಪಿಸಲು ಯಾವುದೇ ಗಡುವು ನೀಡಲಿಲ್ಲ. ನೀಡಿದ್ದರೆ ಜನರ ದಿಟ್ಟಿಯೆಲ್ಲಾ ಅಲ್ಲಿನ ಕಸ ಕಡ್ಡಿಗಳ ಮೇಲೇ ನೆಟ್ಟು ಮತ್ತೆ ಭ್ರಮ ನಿರಸನ ಕಾದಿತ್ತು. ಏನಂತೀರಿ ?
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...