ಕರ್ನಾಟಕದ ಮಾರುಕಟ್ಟೆಯಲ್ಲಿ ಚೀನಾ ಅಕ್ಕಿ - ಬರೀ ವದಂತಿ ಬಿಡಿ
ದಾವಣಗೆರೆ : ಚೀನಾದಿಂದ ಆಮದಾದ ಅಕ್ಕಿ ರಾಜ್ಯದ ಮಾರುಕಟ್ಟೆ ಪ್ರವೇಶಿಸಿದೆಯೆನ್ನುವ ಸುದ್ದಿ ಶುದ್ಧ ಸುಳ್ಳು. ಇಂಥಾ ವದಂತಿಗಳಿಗೆ ರಾಜ್ಯದ ರೈತರು ಹಾಗೂ ವರ್ತಕರು ಕಿವಿ ಕೊಡಬಾರದೆಂದು ಮಾಯಕೊಂಡ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರ ಕಳಿಸಿದ 15 ಲಕ್ಷ ಟನ್ ಅಕ್ಕಿಯನ್ನು ಗುಣಮಟ್ಟ ಸರಿಯಾಗಿಲ್ಲದ ಕಾರಣದಿಂದ 5.25 ಲಕ್ಷ ರುಪಾಯಿಗಳಿಗೆ ರಾಜ್ಯ ಸರ್ಕಾರ ಮಾರಾಟ ಮಾಡಿತ್ತು . ಅದೇ ಅಕ್ಕಿಗೆ ಕಲಬೆರಕೆ ಮಾಡಿ ಚೀನಾದ ಅಕ್ಕಿಯೆಂದು ಮಾರಾಟ ಮಾಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರನಾಥ್ ಅಭಿಪ್ರಾಯಪಟ್ಟರು .
ಚೀನಾ ಅಕ್ಕಿ ಭಾರತಕ್ಕೆ ಬಂದಿದೆ ಎನ್ನುವ ಸುದ್ದಿಯನ್ನು ಕೆಲವು ಪತ್ರಿಕೆಗಳೂ ಪ್ರಕಟಿಸಿವೆ. ಚೀನಾ ಅಕ್ಕಿಯ ವದಂತಿಗಳಿಂದಾಗಿ ಅಕ್ಕಿಯ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 100 ರಿಂದ 200 ರು.ವರೆಗೆ ಕುಸಿದಿದೆ. ಸಣ್ಣ ಪುಟ್ಟ ವರ್ತಕರು ಚೀನಾ ಅಕ್ಕಿಯ ಆಗಮನದ ಸುದ್ದಿಯಿಂದ ಕಂಗಾಲಾಗಿದ್ದಾರೆ. ದಾವಣಗೆರೆ ಜಿಲ್ಲೆಯ ರೈತರು ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಇಂಥಾ ವದಂತಿಗಳು ಹರಡುವುದರಿಂದ ರೈತ ನಷ್ಟ ಅನುಭವಿಸಬೇಕಾಗುತ್ತದೆ. ಆದರೆ, ಚೀನಾ ಅಕ್ಕಿಯ ಆಗಮನದ ಬಗೆಗಿನ ಸುದ್ದಿಗಳು ಸತ್ಯ ದೂರವಾದ್ದರಿಂದ ಈ ಬಗ್ಗೆ ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಶಾಸಕರು ಅಭಿಪ್ರಾಯ ಪಟ್ಟರು.
ದಾವಣಗೆರೆ ಎಪಿಎಂಸಿಯಲ್ಲಿ ಮೆಕ್ಕೆಜೋಳದ ಖರೀದಿಯನ್ನು ತ್ವರಿತಗೊಳಿಸುವಂತೆ ಆಗ್ರಹಿಸಿದ ರವೀಂದ್ರನಾಥ್, ಕಟಾವು ಹಂತದಲ್ಲಿರುವ ಬಿಟಿ ತಳಿ ಹತ್ತಿಯನ್ನು ಸುಡುತ್ತಿರುವ ರಾಜ್ಯ ರೈತ ಸಂಘದ ಧೋರಣೆಯನ್ನು ವಿರೋಧಿಸಿದರು.
(ಇನ್ಫೋ ವಾರ್ತೆ)