ವೀರಪ್ಪನ್ ವಿರುದ್ಧದ ಕಾರ್ಯಾಚರಣೆ : ಎಸ್.ಎಂ. ಕೃಷ್ಣ ಅಭಿನಂದನೆ
ಬೆಂಗಳೂರು : ಕಾಡುಗಳ್ಳ ವೀರಪ್ಪನ್ ತಂಡದೊಂದಿಗೆ ಶುಕ್ರವಾರ ನಡೆದ ಗುಂಡಿನ ಕಾಳಗದ ಬಳಿಕ ತಮಿಳುನಾಡು ಹಾಗೂ ಕರ್ನಾಟಕ ವಿಶೇಷ ಕಾರ್ಯಪಡೆಯ ಜಂಟಿ ಕಾರ್ಯಾಚರಣೆ ಹುರುಪಿನಿಂದ ಮುಂದುವರಿದಿದೆ. ವೀರಪ್ಪನ್ ತಂಡದ ಒಬ್ಬನನ್ನು ಕೊಂದ ಕಾರ್ಯಪಡೆ ಪೊಲೀಸರು ಈಗ ವೀರಪ್ಪನ್ನನ್ನು ಹಿಡಿಯಲು ಸಂಪೂರ್ಣ ಸಜ್ಜಾಗಿದ್ದಾರೆ.
ಶುಕ್ರವಾರ ಕಾರ್ಯಾಚರಣೆ ನಡೆದ ಪ್ರದೇಶದಲ್ಲಿಯೇ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ತಮಿಳುನಾಡು ಗಡಿಗೆ 3 ಕಿ.ಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ರಾಜ್ಯದ ಪೊಲೀಸ್ ಅಧಿಕಾರಿ ಹರ್ಷವರ್ಧನ ರಾಜು ಅಲ್ಲಿಗೆ ಧಾವಿಸಿದ್ದಾರೆ. ವೀರಪ್ಪನ್ ಶಿಕಾರಿಗೆ ರಾಜ್ಯ ಸರಕಾರ ಎಸ್.ಟಿ.ಎಫ್ಗೆ ಎಲ್ಲ ರೀತಿಯ ನೆರವೂ ನೀಡಲಿದೆ ಎಂದೂ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅಭಿನಂದನೆ : ಎಸ್.ಟಿ.ಎಫ್. ಕಾರ್ಯಾಚರಣೆಗೆ ಎಲ್ಲ ರೀತಿಯ ನೆರವೂ ನೀಡಲಾಗುವುದು ಎಂದು ಘೋಷಿಸಿರುವ ಮುಖ್ಯಮಂತ್ರಿ ಕೃಷ್ಣ ಅವರು, ಶುಕ್ರವಾರದ ಪೊಲೀಸ ಕಾರ್ಯಾಚರಣೆಯ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಾಚರಣೆ ನಮ್ಮ ಪೊಲೀಸ್ ಅಧಿಕಾರಿಗಳು ಸೂಕ್ತ ಮಾರ್ಗದಲ್ಲೇ ಸಾಗುತ್ತಿದ್ದಾರೆ ಎಂಬುದರ ದ್ಯೋತಕವಾಗಿದೆ. ಕಾರ್ಯಾಚರಣೆ ಮುಂದುವರಿಯುತ್ತದೆ ಹಾಗೂ ಪೊಲೀಸರು ಯಶಸ್ಸು ಪಡೆದೇ ತೀರುತ್ತಾರೆ ಎಂದಿರುವ ಎಸ್.ಎಂ. ಕೃಷ್ಣ. ಎಸ್.ಟಿ.ಎಫ್. ಪೊಲೀಸರಿಗೆ ತಾವು ಶಹಬಾಷ್ಗಿರಿ ನೀಡುವುದಾಗಿಯೂ ಹೇಳಿದರು.
ಪರಿಸ್ಥಿತಿ ಅನುಕೂಲಕರವಾಗಿದೆ : ವೀರಪ್ಪನ್ ಪೊಲೀಸ್ ಕಾರ್ಯಾಚರಣೆಗೆ ಹೆದರಿ, ತನಗೆ ಅಷ್ಟು ಅನುಕೂಲಕರವಲ್ಲದ ಹಾಗೂ ಹೊಸ ಜಾಗ (ಕಾಡಿನಲ್ಲಿ ) ದಲ್ಲಿ ಆಶ್ರಯ ಪಡೆದಿರುವುದರಿಂದ ಪೊಲೀಸ್ ಕಾರ್ಯಾಚರಣೆಗೆ ಅನುಕೂಲಕರ ಪರಿಸ್ಥಿತಿ ಇದೆ ಎಂದು ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ತಿಳಿಸಿದ್ದಾರೆ.
(ಯು.ಎನ್.ಐ., ಇಂಡಿಯಾಇನ್ಫೋ ವರದಿ)
ವಾರ್ತಾಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ