ನೆರವಿನ ಹವಿಸ್ಸಿಗೆ ನಿಮ್ಮ ಪಾಲು ಸಂದಿತಾ ?
ಧಗೆ ಹೊರತುಪಡಿಸಿದರೆ ಯಾವತ್ತೂ ಸದ್ದು ಮಾಡದ ಬಾಗಲಕೋಟೆ ಗುರುವಾರ ರಾಜ್ಯದಲ್ಲೇ ಅತ್ಯಂತ ಕನಿಷ್ಠ ತಾಪಮಾನ (12 ಡಿಗ್ರಿ ಸೆಲ್ಷಿಯಸ್) ದಾಖಲಿಸಿದೆ. ಉಳಿದಂತೆ ಹವಾದಲ್ಲಿ ವಿಶೇಷವೇನಿಲ್ಲ . ಮತ್ತದೇ ಒಣಹವೆ. ಸದ್ಯಕ್ಕೆ ಒಣಹವೆ ಬದಲಾಗುವಂತೇನೂ ಕಾಣುತ್ತಿಲ್ಲ . ಬೆಂಗಳೂರಲ್ಲಿ ಕೂಡ ಬಿಸಿಲ ಧಗೆ ಜೋರಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರದ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ ಸುಳಿದಾಡಬಹುದು.
ಈ ನಡುವೆ ಗುಜರಾತ್ನಲ್ಲಿ ಪರಿಹಾರ ಕಾರ್ಯಕ್ರಮಗಳು ಸಮರೋಪಾದಿಯಲ್ಲಿ ಮುಂದುವರಿದಿವೆ. ಈ ಹೊತ್ತಿನ ಸಮಾಚಾರವೆಂದರೆ- ಅವಶೇಷಗಳಡಿ ಸಿಕ್ಕವರನ್ನು ರಕ್ಷಿಸುವ ಕಾರ್ಯವನ್ನು ಸರ್ಕಾರ ಕೈ ಬಿಟ್ಟಿದೆ. ಜೊತೆಗೇ ಈ ನಿರ್ಧಾರಕ್ಕೆ ಸಾರ್ವಜನಿಕರ ವಿರೋಧವೂ ವ್ಯಕ್ತವಾಗಿದೆ. ಕಟ್ಟಡಗಳನ್ನು ನೆಲಸಮಗೊಳಿಸಲು ಧಾವಿಸಿದ ಬುಲ್ಡೋಜರ್ಗಳಿಗೆ ಕಳ್ಳುಬಳ್ಳಿಗಳನ್ನು ಕಳಕೊಂಡ ಜನತೆ ಅಡ್ಡಿ ಪಡಿಸಿರುವ ವರದಿಗಳೂ ಬಂದಿವೆ. ಆದರೂ, ಗುರ್ತಿಸಿರುವ ಬೃಹತ್ ಕಟ್ಟಡಗಳ ಪೈಕಿ 6 ಕಟ್ಟಡಗಳನ್ನು ಗುರುವಾರ ಮಟ್ಟಸಗೊಳಿಸಲಾಗಿದೆ.
ಕರ್ನಾಟಕದಲ್ಲೂ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯ ಪ್ರಗತಿಯಲ್ಲಿದೆ. ಈ ನಡುವೆ, ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಂತ್ರಸ್ತರಿಗೆ ಉದಾರ ನೆರವು ನೀಡುವಂತೆ ಕನ್ನಡಿಗರಲ್ಲಿ ಮತ್ತೆ ಮನವಿ ಸಲ್ಲಿಸಿದ್ದಾರೆ. ಅಂದಹಾಗೆ, ನೀವು ನೆರವು ಸಲ್ಲಿಸಿದಿರಾ ?