ಧಾನ್ಯ ಖರೀದಿ : ಐಎಎಸ್ ಅಧಿಕಾರಿ ಸೇರಿದಂತೆ ಮೂವರ ಅಮಾನತು
ಬೆಂಗಳೂರು : ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸುವಲ್ಲಿ ವಿಫಲರಾಗಿರುವ ಓರ್ವ ಐಎಎಸ್ ಅಧಿಕಾರಿ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರ ಗುರುವಾರ ಅಮಾನತುಗೊಳಿಸಿದೆ.
ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದ ರಾಜ್ಯ ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಈ ವಿಷಯ ತಿಳಿಸಿದರು. ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಬಿ.ಎಲ್.ಶ್ರೀಧರ್ ಅವರನ್ನು ಧಾರವಾಡದಲ್ಲಿ ಬೆಳೆ ಖರೀದಿಸಲು ವಿಫಲರಾಗಿರುವ ಕಾರಣ ಅಮಾನತು ಮಾಡಲಾಗಿದೆ.
ಮಾರುಕಟ್ಟೆ ನಡುವೆ ಪ್ರವೇಶಿಸಿ ಧಾನ್ಯಗಳ ಸಮರ್ಪಕ ಖರೀದಿ ಮಾಡಬಲ್ಲ ತರಪೇತುಗೊಂಡ ಅಧಿಕಾರಿಗಳನ್ನು ಶ್ರೀಧರ್ ಸ್ಥಾನಕ್ಕೆ ನೇಮಿಸಬೇಕು ಎಂದು ಸಚಿವ ಸಂಪುಟದ ಉಪ ಸಮಿತಿ ಒತ್ತಾಯ ತಂದಿದೆ. ಅಮಾನತುಗೊಂಡಿರುವ ಇನ್ನಿತರ ಅಧಿಕಾರಿಗಳೆಂದರೆ- ಧಾರವಾಡದ ಹಂಗಾಮಿ ಜಿಲ್ಲಾಧಿಕಾರಿ ಅದೋನಿ ಹಾಗೂ ನಾಗರಿಕ ಪೂರೈಕೆ ನಿಗಮದ ಧಾರವಾಡ ಜಿಲ್ಲಾ ನಿರ್ವಹಣಾ ಅಧಿಕಾರಿ.
ಪಂಚಾಯತ್ ರಾಜ್ ಸಚಿವ ಎಂ.ವೈ.ಘೋರ್ಪಡೆ ಅವರ ನೈತೃತ್ವದಲ್ಲಿ ಸಂಪುಟವು ಒಂದು ಉಪ ಸಮಿತಿಯನ್ನು ರಚಿಸಿದೆ. ಆಡಳಿತದಲ್ಲಿ ಸುಧಾರಣೆ ತರಲು ನಾಗರಿಕ ಸೇವಾ ನಿಯಮಾವಳಿಗಳಲ್ಲಿ ಸೂಕ್ತ ತಿದ್ದುಪಡಿ ತರುವುದು ಈ ಸಮಿತಿಯ ರಚನೆಯ ಉದ್ದಿಶ್ಯ. ಗೃಹ, ನೀರಾವರಿ, ಸಮಾಜ ಕಲ್ಯಾಣ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಅರಣ್ಯ ಖಾತೆ ಸಚಿವರನ್ನೂ ಒಳಗೊಂಡಿರುವ ಸಮಿತಿ ಇನ್ನು 4 ತಿಂಗಳಲ್ಲಿ ಒಂದು ವರದಿ ಸಲ್ಲಿಸಲಿದೆ.
ವೈದ್ಯರೇ, ಪಿಜಿ ಮಾಡಲು ಗ್ರಾಮೀಣ ಸೇವೆ ಕಡ್ಡಾಯ : ಎಂಬಿಬಿಎಸ್ ಪದವೀಧರ ವೈದ್ಯರು ಸ್ನಾತಕೋತ್ತರ ತರಗತಿ ಸೇರಬಯಸಿದಲ್ಲಿ, ಇನ್ನು ಕಡ್ಡಾಯವಾಗಿ ಒಂದು ವರ್ಷ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಹೊಸ ವೈದ್ಯರನ್ನು 3 ವರ್ಷಗಳ ಕಾಲ ಎಲ್ಲಿಗೂ ವರ್ಗಾಯಿಸಬಾರದು ಎಂಬ ನಿರ್ಧಾರಗಳನ್ನೂ ಸಂಪುಟ ಕೈಗೊಂಡಿದೆ ಎಂದು ಚಂದ್ರಶೇಖರ್ ತಿಳಿಸಿದರು.
(ಯುಎನ್ಐ)