ಸಾಂಕ್ರಾಮಿಕ ರೋಗ ಕರೆದೀರಿ- ಕೇಶುಭಾಯ್ ಎಚ್ಚರಿಕೆ
ಅಂಜಾರ್ : ಅವಶೇಷಗಳಡಿ ತಮ್ಮ ಜನ ಇನ್ನೂ ಬದುಕಿರಬಹುದೆಂಬ ನಂಬುಗೆಯಲ್ಲಿ ಗುಜರಾತ್ ಜನ ದೊಡ್ಡ ಯಂತ್ರಗಳನ್ನು ತಂದು ಹೆಣಗಳನ್ನು ಎತ್ತಲು ಒಪ್ಪುತ್ತಿಲ್ಲ. ಜನರ ಈ ಧೋರಣೆ ಇನ್ನಷ್ಟು ಜನರ ಸಾವಿಗೆ ಕಾರಣವಾದೀತು ಎಂದು ಗುಜರಾತ್ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಶುಕ್ರವಾರ ಎಚ್ಚರಿಸಿದ್ದಾರೆ.
ಆರು ದಿನ ಕಳೆದಿವೆ. ಇನ್ನು ಯಾವುದೇ ಪವಾಡ ಸಾಧ್ಯವಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಜೀವ ಉಳಿದಿದ್ದರೂ, ಅವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕೊಳೆತು ನಾರುತ್ತಿರುವ ಹೆಣಗಳನ್ನು ಹೊರತೆಗೆಯದೆ ಇರಲಾಗದು. ಇನ್ನಷ್ಟು ದಿನ ತಡೆದಲ್ಲಿ ಸಾಂಕ್ರಾಮಿಕ ರೋಗ ಕಣಗಳು ಗಾಳಿಯ ಪ್ರತಿ ಕಣದಲ್ಲಿ ಸೇರಿ ಹೋಗುವ ಆತಂಕವಿದೆ. ಜನ ಇದನ್ನು ಮನಗಂಡು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಪಟೇಲ್ ಮನವಿ ಮಾಡಿದ್ದಾರೆ.
ಈವರೆಗೆ ಸುಮಾರು 35 ಸಾವಿರ ಮಂದಿ ಸತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟು 15 ಸಾವಿರ ಕೋಟಿ ರುಪಾಯಿ ಆಸ್ತಿ- ಪಾಸ್ತಿ ಹಾಳಾಗಿದೆ. ಇನ್ನು ನಾವು ಬದುಕುಳಿದಿರುವ ಜನರ ಹಿತರಕ್ಷಣೆಗೆ ಗಮನ ಹರಿಸಬೇಕಾಗಿದೆ. ಅವಶೇಷಗಳಿಗೆಲ್ಲಾ ಸಾಂಕ್ರಾಮಿಕ ರೋಗ ನಿವಾರಕಗಳನ್ನು ಸಿಂಪಡಿಸಲಾಗುವುದು. ಉಪಯೋಗಿಸುವ ನೀರಿಗೆ ಸಾಕಷ್ಟು ಕ್ಲೋರಿನ್ ಸೇರಿಸಲಾಗುವುದು ಎಂದರು.
ಕೇಂದ್ರ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರೊಂದಿಗೆ ಕಛ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಪಟೇಲ್, ಹಣ ಕಾಸು ಕಳಕೊಂಡಿರುವ ಸಂತ್ರಸ್ತರಿಗೆ ದಿನಕ್ಕೆ 10 ರುಪಾಯಿಯಂತೆ ಕೊಡುತ್ತಿರುವ ನೆರವನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಗಾಂಧಿಧಾಮ ಮತ್ತು ಆದಿಪುರದ ಸಂತ್ರಸ್ತರಿಗೆ ಒಂದು ಲಕ್ಷ ಗೃಹೋಪಯೋಗಿ ಕಿಟ್ಗಳು ಹಾಗೂ ದವಸ ಧಾನ್ಯಗಳನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿತರಿಸಲಾಯಿತು.
(ಪಿಟಿಐ)
ಮುಖಪುಟ |