ಪಾಸ್ಪೋರ್ಟ್ ನೀಡಿಕೆ ಮತ್ತಷ್ಟು ಸರಳ ಹಾಗೂ ತ್ವರಿತ - ಕೃಷ್ಣಂರಾಜು
ಗುಲ್ಬರ್ಗಾ : ಪಾಸ್ಪೋರ್ಟ್ ನೀಡಿಕೆ ಕ್ರಮವನ್ನು ಮತ್ತಷ್ಟು ಸರಳ ಹಾಗೂ ತ್ವರಿತಗೊಳಿಸಲಾಗುವುದು ಹಾಗೂ ಪಾಸ್ಪೋರ್ಟ್ ಸಿದ್ಧಪಡಿಸಲು ಯಂತ್ರಗಳ ನೆರವನ್ನು ಪಡೆಯಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಯು. ವಿ. ಕೃಷ್ಣಂರಾಜು ಹೇಳಿದ್ದಾರೆ.
ಗುಲ್ಬರ್ಗಾದಲ್ಲಿ ಪಾಸ್ಪೋರ್ಟ್ ಅರ್ಜಿ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಎಲ್ಲಾ ಪ್ರಮುಖ ಪಾಸ್ಪೋರ್ಟ್ ಕಚೇರಿಗಳನ್ನು ಅಂತರ್ಜಾಲದ ಮೂಲಕ ನವದೆಹಲಿಯಲ್ಲಿರುವ ಕೇಂದ್ರ ಪಾಸ್ಪೋರ್ಟ್ ಕಚೇರಿಯಾಂದಿಗೆ ಬೆಸೆಯುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಪಾಸ್ಪೋರ್ಟ್ ಕಚೇರಿಗಳಲ್ಲಿ ಕಂಪ್ಯೂಟರೀಕರಣ ಸಂಪೂರ್ಣಗೊಂಡ ನಂತರ ಕಚೇರಿಗಳ ನಡುವೆ ಅಂತರ್ಜಾಲವನ್ನು ಬೆಸೆಯುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪಾಸ್ಪೋರ್ಟ್ ಅರ್ಜಿ ನೀಡಿಕೆಯಲ್ಲಿ ಖಾಸಗಿ ವಲಯವನ್ನು ಸೇರಿಸಿಕೊಳ್ಳುವ ಮೂಲಕ ಪಾಸ್ಪೋರ್ಟ್ ನೀಡಿಕೆ ಕ್ರಮವನ್ನು ಹೆಚ್ಚೆಚ್ಚು ವಿಕೇಂದ್ರಿಕರಣಗೊಳಿಸುವ ನೀತಿಯನ್ನು ಪರಿಚಯಿಸಲಾಗುವುದು. ಪ್ರಸ್ತುತ ಗುಲ್ಬರ್ಗಾದಲ್ಲಿ ಕಾರ್ಯಾರಂಭ ಮಾಡುತ್ತಿರುವ ಕಚೇರಿ- ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಬಿಜಾಪುರ, ಬಾಗಲಕೋಟೆ ಮತ್ತು ರಾಯಚೂರು ಪ್ರದೇಶಗಳ ಜನತೆಯ ಅಗತ್ಯವನ್ನು ಪೂರೈಸುವುದು ಎಂದು ಸಚಿವರು ಹೇಳಿದರು.
ಕಳೆದ ವರ್ಷ 22.43 ಲಕ್ಷ ಪಾಸ್ಪೋರ್ಟ್ಗಳನ್ನು ವಿತರಿಸಲಾಗಿದೆ. 1.25 ಲಕ್ಷ ಅರ್ಜಿಗಳು ಕರ್ನಾಟಕದಿಂದಲೇ ಬಂದಿವೆ. ಆನ್ಲೈನ್ ಮೂಲಕ ಪಾಸ್ಪೋರ್ಟ್ಗೆ ಅರ್ಜಿ ಗುಜರಾಯಿಸುವ ವಿಧಾನ ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿದೆ. ಈ ವಿಧಾನವನ್ನು ಇತರ ನಗರಗಳಿಗೂ ಪರಿಚಯಿಸಲಾಗುವುದು ಎಂದು ಕೃಷ್ಣಂರಾಜು ತಿಳಿಸಿದರು.
ಪಾಕಿಸ್ತಾನದ ಉತ್ತಮ ನಡವಳಿಕೆ : ಗುಜರಾತ್ ಭೂಕಂಪ ಸಂತ್ರಸ್ತರಿಗೆ ನೆರವು ಒದಗಿಸಿದ ಪಾಕಿಸ್ತಾನದ ನಡವಳಿಕೆ ಎರಡೂ ದೇಶಗಳ ಬಾಂಧವ್ಯ ವೃದ್ಧಿಗೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕೃಷ್ಣಂರಾಜು ತಿಳಿಸಿದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...