ವಿದ್ಯುತ್ ಕ್ಷೇತ್ರದಲ್ಲಿ ಕಠಿಣ ಆಯ್ಕೆ ಹಾಗೂ ದೃಢ ನಿರ್ಧಾರ - ಕೃಷ್ಣ
ಬೆಂಗಳೂರು : ರೈತರು ಸೇರಿದಂತೆ ರಾಜ್ಯದ ಎಲ್ಲಾ ವಿದ್ಯುತ್ ಬಳಕೆದಾರರಿಗೆ ಮೀಟರ್ಗಳನ್ನು ಕಡ್ಡಾಯವಾಗಿ ಅಳವಡಿಸಲಾಗುವುದು. ಕಠಿಣ ಆಯ್ಕೆಗಳು ಹಾಗೂ ನಿರ್ಧಾರಗಳನ್ನು ಕೈಗೊಳ್ಳುವ ಜರೂರು ನಮ್ಮದಾಗಿದೆ ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಕರ್ನಾಟಕ ಇನ್ಫ್ರಾಸ್ಟ್ರಕ್ಚರ್ ಟಾಸ್ಕ್ಫೋರ್ಸ್ ಹಾಗೂ ಭಾರತೀಯ ಕೈಗಾರಿಕೆಗಳ ಒಕ್ಕೂಟ ಗುರುವಾರ ಜಂಟಿಯಾಗಿ ಏರ್ಪಡಿಸಿದ್ದ ಕರ್ನಾಟಕದ ವಿದ್ಯುತ್ ಮತ್ತು ಇಂಧನ ನೀತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಅವರು ವಿದ್ಯುತ್ ನೀತಿಯಲ್ಲಿ ಯಾವುದೇ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದರು.
ಈ ಮುನ್ನ ಭಾರತೀಯ ಜನತಾಪಕ್ಷ ಹಾಗೂ ಕೆಲವು ರೈತಪರ ಸಂಘಟನೆಗಳು ನೀರಾವರಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿದ್ದವು. ಈ ಸಂಘಟನೆಗಳನ್ನು ಹೆಸರಿಸದೇ ಮಾತನಾಡಿದ ಮುಖ್ಯಮಂತ್ರಿ, ಮೀಟರ್ ಅಳವಡಿಸುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕೃಷ್ಯುತ್ಪನ್ನಗಳಿಗೆ ಸೂಕ್ತ ಬೆಂಬಲ ದೊರಕುವಂತಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೃಢ ಸಂಕಲ್ಪ ಮಾಡಿದ್ದು, ಈ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನಿಸುತ್ತಿವೆ. ರೈತರ ಹಿತಾಸಕ್ತಿ ರಕ್ಷಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ರೈತರು ಮುಂದೆಂದೂ ಸಂಕಷ್ಟಕ್ಕೆ ಸಿಲುಕದಂತೆ ಸರ್ಕಾರ ಕ್ರಮ ಕೈಗೊಳ್ಳುವುದು. ರೈತರು ಸಂಕಷ್ಟದಲ್ಲಿರುವುದರಿಂದ ಪ್ರಸ್ತುತ ಒದಗಿಸುತ್ತಿರುವ 142 ಕೋಟಿ ರು. ಸಬ್ಸಿಡಿಯ ವಿದ್ಯುತ್ತನ್ನು ರೈತರಿಗೆ ಮುಂದುವರಿಸಲಾಗುವುದು ಎಂದು ಕೃಷ್ಣ ಹೇಳಿದರು.
(ಯುಎನ್ಐ)