ಗ್ಯಾಸ್ ಸಿಲಿಂಡರ್ ಸ್ಫೋಟ ಮಗು ಸಾವು, ನಾಲ್ವರಿಗೆ ಗಾಯ
ಬೆಂಗಳೂರು : ಬೆಂಗಳೂರಿನ ಎಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ ಪರಿಣಾಮವಾಗಿ ಆರ್.ಸಿ.ಸಿ. ಕಟ್ಟಡವೊಂದು ಕುಸಿದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ನಾಲ್ವರು ಗಾಯಗೊಂಡಿದ್ದಾರೆ.
ಗುಜರಾತ್ ಭೂಕಂಪದ ಕಹಿ ಹಾಗೂ ಸೋಮವಾರದ ಭೂಕಂಪದ ಭೀತಿಯಿಂದ ಹೊರಬರಲಾಗದೇ ಮನದಲ್ಲೇ ಕುದಿಯುತ್ತಾ, ಆತಂಕ ಹಾಗೂ ಭಯದಲ್ಲಿ ಬದುಕುತ್ತಿರುವ ಜನ, ಗುರುವಾರ ಬೆಳಗ್ಗೆ ಸಂಭವಿಸಿದ ಈ ಸಿಲಿಂಡರ್ ಸ್ಫೋಟದ ನಡುಕಕ್ಕೆ ಹೆದರಿ ಮನೆಗಳಿಂದ ಹೊರಗೋಡಿ ಬಂದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಆರ್.ಸಿ.ಸಿ. ಕಟ್ಟಡ ಕುಸಿದಿದ್ದು, ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಮನೆಯ ಒಡತಿ ಮಹೇಶ್ವರಿ ಅವರಿಗೆ ಸುಟ್ಟಗಾಯಗಳಾಗಿವೆ.
ರಾತ್ರಿಯಿಂದಲೇ ಗ್ಯಾಸ್ ಲೀಕ್ ಆಗಿದ್ದು, ಬೆಳಗ್ಗೆ ಒಲೆ ಹಚ್ಚುಲು ಬಂದಾಗ ಈ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದಿಂದ ಅಕ್ಕಪಕ್ಕದ ಮನೆಗಳೂ ಜಖಂಗೊಂಡಿದ್ದು, ಭಾರಿ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.