ಬಳ್ಳಾರಿಯಲ್ಲಿ ಸಚಿವ ಟಿ. ಜಾನ್ ಪ್ರತಿಕೃತಿ ದಹನ, ಮೆರವಣಿಗೆ
ಬಳ್ಳಾರಿ : ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂ ಧರ್ಮೀಯರ ಭಾವನೆಗಳಿಗೆ ಕುಂದುಂಟು ಮಾಡಿರುವ ನಾಗರಿಕ ವಿಮಾನಯಾನ ಹಾಗೂ ಮೂಲಭೂತ ಸೌಕರ್ಯಗಳ ಸಚಿವ ಟಿ. ಜಾನ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಇಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಭಾರತೀಯ ಜನತಾಪಕ್ಷದ ಸ್ಥಳೀಯ ಮುಖಂಡ ಕರುಣಾಕರ ರೆಡ್ಡಿ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಗುರುವಾರ ಇಲ್ಲಿನ ದುರ್ಗಮ್ಮ ಗುಡಿಯ ಬಳಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಕೋಮು ಸಾಮರಸ್ಯ ಹಾಳು ಮಾಡುವಂಥ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವರನ್ನು ಬಂಧಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು.
ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ರಾಯಲ್ ಸರ್ಕಲ್ ಬಳಿ ಸಚಿವ ಜಾನ್ ಅವರ ಪ್ರತಿಕೃತಿಯನ್ನು ಸುಟ್ಟು, ಅವರ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರುಣಾಕರ್ ಅವರು, ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕೂಡ ಜಾನ್ರನ್ನು ಕೈಬಿಡುವಂತೆ ಆಗ್ರಹಿಸಿದರು.
(ಬಳ್ಳಾರಿ ಪ್ರತಿನಿಧಿಯಿಂದ)
ವಾರ್ತಾಸಂಚಯ
ಮುಖಪುಟ