ಭವಿತವ್ಯದ ಕಂಪನ : ಹಾನಿ ತಡೆಗೆ ಹೊಸ ವಿಭಾಗೀಯ ವಿಂಗಡಣೆ
*ದೀಪ್ಷಿಕ ಘೋಷ್
ನವದೆಹಲಿ : ಭವಿತವ್ಯದ ಸಂಭವನೀಯ ಭೂಕಂಪಗಳಿಗೆ ಸಜ್ಜಾಗುವ ನಿಟ್ಟಿನಲ್ಲಿ ಭೂಕಂಪ ಸಂಭವಿಸಬಹುದಾದ ಜಾಗೆಗಳ ರಕ್ಷಣೆಗಾಗಿ ಹೊಸದಾಗಿ ಪ್ರದೇಶವಾರು ವಿಭಾಗಗಳನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರತೀಯ ಭೂಗರ್ಭ ಇಲಾಖೆಯ ಹಿರಿಯ ವಿಜ್ಞಾನಿ ಆರ್.ಡಿ.ಶುಕ್ಲ ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ಈಗ 5 ವಿಭಾಗಗಳಿದ್ದು, ಬೆಂಗಳೂರು ಮೊದಲ ವಿಭಾಗಕ್ಕೆ ಸೇರಿತ್ತು. ಅಲ್ಲಿ ಭೂಕಂಪ ಆಗುವುದೇ ಇಲ್ಲ ಎನ್ನಲಾಗಿತ್ತು. ಈ ಕಾರಣ ಭೂಕಂಪ ಆಗದ ವಿಭಾಗದಲ್ಲಿದ್ದ ಬೆಂಗಳೂರಿಗರಿಗೆ ಅದರ ಬಗೆಗೆ ಮುನ್ಸೂಚನೆ ಕೊಡುವ ಯೋಚನೆಯನ್ನೇ ಇಲಾಖೆ ಮಾಡಲಾಗಲಿಲ್ಲ (ಗುಜರಾತ್ನಲ್ಲಿ ಕಂಪನಕ್ಕೆ 5 ನಿಮಿಷ ಮುಂಚೆ ಭೂಕಂಪದ ವಿಷಯವನ್ನು ಸಂಸ್ಥೆ ಹೇಳಿತ್ತು). ಇನ್ನು ಮುಂದೆ ಇಂಥ ಹಠಾತ್ ಆಘಾತಗಳಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಈ ಬದಲಾವಣೆ ತರಲು ಸರ್ಕಾರ ಯೋಜಿಸಿದ್ದು, ಕೇವಲ 4 ವಿಭಾಗಗಳನ್ನು ರಚಿಸಲಾಗುವುದು ಎಂದು ಶುಕ್ಲ ಹೇಳಿದರು.
ಎರಡರಿಂದ 3 ರಿಕ್ಟರ್ ಮಾನದಷ್ಟು ಭೂಕಂಪ ಸಂಭವಿಸಬಹುದಾದ ಮುಂಬೈ, ಲಾಥೂರ್ ಮೊದಲಾದ ಹೆಚ್ಚು ವ್ಯಾವಹಾರಿಕ ಚಟುವಟಿಕೆಗಳುಳ್ಳ ಜಾಗೆಗಳನ್ನು ಒಂದು ವಿಭಾಗದಡಿ ತರಲಾಗುವುದು. ಆಯಾ ವಿಭಾಗಗಳ ಸ್ಥಿತಿ- ಗತಿಗಳನ್ನು ಪರಿಶೀಲಿಸಿ, ಕಟ್ಟಡಗಳಿಗೆ ಉತ್ತಮ ಗುಣ ಮಟ್ಟದ ಉಕ್ಕು ಹಾಗೂ ಕಾಂಕ್ರೀಟನ್ನು ಬಳಸಲಾಗಿದೆಯೇ ಎಬುದನ್ನು ಪತ್ತೆ ಹಚ್ಚಿ, ಅಂಥ ಕಟ್ಟಡಗಳನ್ನು ಸರಿ ಪಡಿಸುವ ಅಥವಾ ಕೆಡವಿಹಾಕುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶುಕ್ಲ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಟಿ.ಕೆ. ದತ್ತ ಇನ್ನಷ್ಟು ಮಹತ್ತರ ವಿಷಯಗಳನ್ನು ತಿಳಿಸಿದ್ದಾರೆ. ಅವು-
- ಭಾರತದ ಶಿರೋ ಪ್ರದೇಶದ ಮುಕ್ಕಾಲು ಭಾಗ ಜಾಗೆಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ.
- ವಿಶ್ವದಲ್ಲೇ ಭೀಕರ ಎನ್ನುವಂಥ ಭೂಕಂಪಗಳೂ ಇಲ್ಲಿ ಸಂಭವಿಸುವ ಲಕ್ಷಣಗಳು ಕಂಡುಬರುತ್ತಿವೆ.
- ದೇಶದಲ್ಲಿ ಕನಿಷ್ಠ ಪಕ್ಷ ನಾಲ್ಕು ಸೂಕ್ಷ್ಮಾತಿಸೂಕ್ಷ್ಮ ಪ್ರದೇಶಗಳಿರುವುದು ಭೂಗರ್ಭ ಸಂಶೋಧನೆಯಿಂದ ತಿಳಿದುಬಂದಿದೆ.
- ಅಸ್ಸಾಂ ಮೂಲಕ ನಾಗಪುರ ಸಂಪರ್ಕಿಸುವ ಮಾರ್ಗದ ಭೂಗರ್ಭವೂ ತಕತಕ ಕುದಿಯುತ್ತಿರುವುದು ಬೆಳಕಿಗೆ ಬಂದಿದೆ.
- ದೆಹಲಿಯ 50 ಕಿ.ಮೀ. ವ್ಯಾಪ್ತಿಯಲ್ಲಿ ಸಂಭವಿಸಬಹುದಾದ ಭೂಕಂಪನದಿಂದ ಹಳೆ ದೆಹಲಿಗೆ ದೊಡ್ಡ ಹೊಡೆತ ಬೀಳಲಿದೆ.
- ವಿವಾದಾತ್ಮಕ ತೆಹ್ರಿ ಅಣೆಕಟ್ಟು ಹಿಮಾಲಯಕ್ಕೆ ಹತ್ತಿರದಲ್ಲಿರುವುದರಿಂದ ಅಲ್ಲೂ ಭೂಕಂಪ ಆಗುವ ನಿಚ್ಚಳ ಸಾಧ್ಯತೆಯಿದೆ.