ಈಗ ಬೇಕಾಗಿರುವುದು ಆಹಾರ ಬಟ್ಟೆಗಳಲ್ಲ,ಪುಟ್ಟದೊಂದು ಟೆಂಟು
ಕಚ್ : ವಿಶ್ವದೆಲ್ಲೆಡೆಯಿಂದ ನೆರವಿನ ಮಹಾಪೂರಗಳು ಗುಜರಾತಿಗೆ ಹರಿದು ಬರುತ್ತಿರುವಾಗ, ಕಚ್ ಜಿಲ್ಲೆಯ ನಿರ್ವಸಿತರು ಆಹಾರ ಮತ್ತೆ ಬಟ್ಟೆ ಯ ನೆರವನ್ನು ತಿರಸ್ಕರಿಸಿದ್ದಾರೆ.
ನಾವು ಈ ಬಯಲಿನಲ್ಲಿ ಕುಳಿತುಕೊಂಡು, ಚಳಿ ಗಾಳಿಗೆ ನಡುಗುತ್ತಾ ಕೊಟ್ಟ ಆಹಾರವನ್ನು ತಿನ್ನುವುದಾದರೂ ಹೇಗೆ ?, ತಲೆ ಮೇಲೆ ಓಡಾಡುವ ಕಾಗೆ, ಹದ್ದುಗಳ ಬಾಯಿಯಿಂದ ಪ್ಯಾಕೆಟ್ ಆಹಾರಗಳನ್ನು ಕಾಪಾಡಿಕೊಂಡು ತಿನ್ನುವುದು ಎಷ್ಟು ದುಸ್ತರ ಅಂತ ನೀವೇ ಯೋಚಿಸಿ ಎಂದು ಅಲ್ಲಿನ ನಿವಾಸಿಗಳು ದುಃಖದಿಂದ ಕೇಳುತ್ತಾರೆ.
ಪ್ಲಾಸ್ಟಿಕ್ ಟೆಂಟಾದರೂ ಸರಿ: ಈಗ ಅಗತ್ಯವಿರುವುದು ಒಂದು ಸೂರು. ಅದು ಪ್ಲಾಸ್ಟಿಕ್ ಟೆಂಟೇ ಆಗಿರಬಹುದು. ಇನ್ನೇನೋ ಹರುಕು ಮುರುಕು ಬಟ್ಟೆಗಳದ್ದಾದರೂ ಆಗಬಹುದು, ಆದರೆ ಮೈ ಒಣಗಿಸುವ ಬಿಸಿಲಿನಲ್ಲಿ ಒಂದಿಷ್ಟು ನೆರಳು ಬೇಕು ಎಂದು ಕಳೆದ ಐದು ದಿನಗಳಿಂದ ಮೈದಾನದಲ್ಲಿ ದಿನ ಕಳೆಯುತ್ತಿರುವ ನಿರ್ವಸಿತರು ಹೇಳುತ್ತಾರೆ.
ಅನ್ನ, ದಾಲ್ ಇಲ್ಲದೆ ಕೆಡುತ್ತಿರುವ ಆರೋಗ್ಯ : ಕಚ್ಗೆ ಲೋಡುಗಟ್ಟಲೆ ಆಹಾರ ಪ್ಯಾಕೆಟ್ಗಳು ಮತ್ತು ಬಟ್ಟೆಗಳ ನೆರವು ಬಂದಿವೆ. ಗುಜರಾತ್ನ ಮಂದಿ ಶತಮಾನಗಳಿಂದ ಅನ್ನ ಮತ್ತು ದಾಲ್ ತಿನ್ನುತ್ತಿದ್ದವರು. ಈಗ ಲಾರಿಗಳಲ್ಲಿ ಬಂದು ರಾಶಿ ಬಿದ್ದಿರುವ ಬ್ರೆಡ್ಡು, ಪೂರಿ, ಪಲ್ಯಗಳು ತುಂಬಾ ಹಸಿವಾದಾಗಲೇನೋ ಸರಿಹೋಗುತ್ತದೆ. ಆದರೆ ದಿನ ಕಳೆದಂತೆ ಅದನ್ನೇ ತಿನ್ನುವುದು ಕಷ್ಟವಾಗುತ್ತಿದೆ. ಸೂಕ್ಷ್ಮ ಪ್ರಕೃತಿಯವರ ಆರೋಗ್ಯ ಹದಗೆಡುತ್ತಿದೆ. ಮಕ್ಕಳು ಡಯರಿಯಾ ಮತ್ತು ಶೀತ ಜ್ವರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಔಷಧಿ, ಟ್ರೀಟ್ಮೆಂಟ್ಗಳ ನೆರವು ಎಲ್ಲಿಯೂ ಕಾಣ ಸಿಗುತ್ತಿಲ್ಲ.
ಬಟ್ಟೆಗಳೂ ಅಷ್ಟೆ. ಬಂದಿರುವವೆಲ್ಲಾ, ಜೀನ್ಸ್ ಪ್ಯಾಂಟ್, ಟೀ ಶರ್ಟ್ , ಚೂಡಿದಾರ್ಗಳು. ಈ ಡ್ರೆಸ್ ಹಾಕಿಕೊಂಡು ಕೆಲಸ ಮಾಡುವುದಕ್ಕೆ ಹಳ್ಳಿ ಮಂದಿಯ ಕೈಯಯಲ್ಲಿ ಸಾಧ್ಯವಾಗುತ್ತಿಲ್ಲ. ಕಚ್ ನಗರ ಇಲ್ಲವೇ ಇಲ್ಲ ಎಂಬಷ್ಟು ಕುಸಿದುಹೋಗಿದೆ. ರಾಕ್ಷಸ ಭೂಕಂಪದಿಂದ ಆಗಿರುವ ಮಾನಸಿಕ ಆಘಾತದಿಂದ ಹೊರಬರಲು ಪರದಾಡುತ್ತಿರುವವರು, ಮುಂದೇನು ಎಂದು ದಿಕ್ಕುಗಾಣದೇ ಕುಳಿತವರಿಗೆ ಸೂರು ಬೇಕು. ಅಲ್ಲಿ ನೆರವಿಗಾಗಿ ಧಾವಿಸಿರುವ ಸ್ವಯಂ ಸೇವಕರನ್ನು ಬಚಾವ್ ಮತ್ತು ಕಚ್ ಪ್ರದೇಶದ ಮಂದಿ ‘ ಈ ಆಹಾರದ ಲೋಡುಗಳನ್ನು ಹಿಂದಕ್ಕೆ ಕಳುಹಿಸಿ. ಟೆಂಟುಗಳನ್ನು ಹಾಕಿಸಿಕೊಡಿ’ ಎಂದು ಬೇಡುತ್ತಿದ್ದಾರೆ. ಚೊಪ್ಪಾ ದುವಾ ಹಳ್ಳಿಯಲ್ಲಿನ ಸುಮಾರು 12 ಸಾವಿರ ಮಂದಿ ನಿರ್ವಸಿತರೂ , ಸದ್ಯಕ್ಕೆ ಒಂದು ಟೆಂಟು ಹಾಕಿಕೊಡಿ. ಅಥವಾ ಸಾಮಾಗ್ರಿಯಾದರೂ ತಂದು ಕೊಡಿ ಎನ್ನುತ್ತಿದ್ದಾರೆ.
(ಇನ್ಫೋ ವಾರ್ತೆ)