ರಾಷ್ಟ್ರಕವಿ ಕುವೆಂಪು ಸ್ಮಾರಕ ಅರ್ಪಣೆ ಕಾರ್ಯಕ್ರಮ ಮುಂದೂಡಿಕೆ
ಶಿವಮೊಗ್ಗ : ರಾಷ್ಟ್ರಕವಿ ಕುವೆಂಪು ಅವರ ಸ್ಮರಣಾರ್ಥ ನವೀಕರಿಸಲಾಗಿರುವ ಅವರ ಗೃಹ ಹಾಗೂ ಕವಿಶೈಲದ ಸ್ಮಾರಕಗಳನ್ನು ರಾಷ್ಟ್ರಕ್ಕೆ ಅರ್ಪಿಸಲು ಫೆ. 2ರಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮ ಗುಜರಾತ್ ಭೂಕಂಪದ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿದೆ.
ನಿಗದಿತ ಕಾರ್ಯಕ್ರಮದಂತೆ ಮುಖ್ಯಮಂತ್ರಿ ಎಸ್.ಎ. ಕೃಷ್ಣ ಅವರು ಸ್ಮಾರಕವನ್ನು ಫೆ.2ರಂದು ರಾಷ್ಟ್ರಕ್ಕೆ ಅರ್ಪಿಸಬೇಕಾಗಿತ್ತು. ಈ ಸಂಬಂಧ ನಡೆಯಲಿದ್ದ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆ ಸಜ್ಜಾಗಿತ್ತು.
ಗುಜರಾತ್ನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಸಾವಿರಾರು ಜನ ಸಾವನ್ನಪ್ಪಿರುವಾಗ ರಾಜ್ಯ ಸರಕಾರ ಅಧಿಕೃತವಾಗಿ ಸಂತೋಷ ಸಮಾರಂಭವೊಂದನ್ನು ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳು ಬಂದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಈ ವಿಷಯವನ್ನು ಮಂಗಳವಾರ ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಡಿ.ಬಿ. ಚಂದ್ರೇಗೌಡರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ನೂರು ವರ್ಷಗಳಷ್ಟು ಹಳೆಯದಾದ ಕುವೆಂಪು ಅವರ ನಿವಾಸದ ನವೀಕರಣ ಹಾಗೂ ಕವಿಶೈಲದ ಸ್ಮಾರಕ ನಿರ್ಮಾಣಕ್ಕೆ 1.20 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...