ಭಾರತದಲ್ಲಿ ಎಲ್ಲಿ ಯಾವಾಗ ಕಂಪನ ಆಗುತ್ತದೆ, ಉತ್ತರ ಇದೆಯಾ ?
* ದೀಪ್ಷಿಕ ಘೋಷ್
ಜಪಾನಿನಲ್ಲಿ ಮನೆಗಳನ್ನು ಕಾರ್ಡ್ಬೋರ್ಡು ಮೊದಲಾದ ಹಗುರ ವಸ್ತುಗಳಿಂದ ನಿರ್ಮಿಸುತ್ತಾರೆ ಯಾಕೆ ? ಇದು ಮೂರು- ನಾಲ್ಕನೇ ಇಯತ್ತೆಯ ಮಕ್ಕಳಿಗೆ ಸಮಾಜ ಶಾಸ್ತ್ರದ ಭೂಗೋಳ ವಿಭಾಗದಲ್ಲಿ ನ ಪ್ರಶ್ನೆ. ಅಲ್ಲಿ ಪದೇಪದೇ ಭೂಕಂಪ ಆಗೋದರಿಂದ ಈ ಮುನ್ನೆಚ್ಚರ ಎಂಬ ಉತ್ತರ ಥಟ್ಟನೆ ಎಂಥ ದಡ್ಡನ ಬಾಯಿಂದಲೂ ಹೊರಬರುತ್ತದೆ. ಆದರೆ ಭಾರತದಲ್ಲಿ ಎಲ್ಲಿ, ಯಾವಾಗ, ಎಷ್ಟು ಹೊತ್ತಿಗೆ ಭೂಕಂಪ ಆಗುತ್ತದೆ ಎಂದು ತಿಳಿಸುವಂಥ ವಿಜ್ಞಾನವೇ ಇಲ್ಲವೇ ? ಇದೋ ಉತ್ತರ ಇಲ್ಲಿದೆ...
ಭಾರತದಲ್ಲಿ ಭೂಕಂಪ ಸಂಭವನೀಯ ಪ್ರದೇಶಗಳ ಆಧಾರದ ಮೇಲೆ ಪ್ರಸ್ತುತ 5 ವಿಭಾಗಗಳನ್ನು ಮಾಡಲಾಗಿದ್ದು, ಈ ವಿಂಗಡಣೆ ಸರಿಯಾಗಿಲ್ಲ ಎಂಬ ಅಭಿಪ್ರಾಯಗಳು ಈಗ ಕೇಳಿಬರುತ್ತಿದೆ. ಗುಜರಾತ್ನಲ್ಲಿ ಭೂಕಂಪ ಆಗಲಿದೆ ಅನ್ನೋ ವಿಷಯವನ್ನು ಕಂಪನಕ್ಕೆ ಕೇವಲ 5 ನಿಮಿಷಗಳ ಮುಂಚೆ ವಿಜ್ಞಾನಿಗಳು ಪ್ರಕಟಿಸಿದರು. ಆದರೆ ಅದು ಎಷ್ಟೋ ಜನಕ್ಕೆ ತಲುಪಲೇ ಇಲ್ಲ. ತಲುಪಿದ್ದರೂ ಭೂತಾಯಿಯ ಆಕಳಿಕೆಗೆ 5 ನಿಮಿಷ ಮುನ್ನ ಆಕೆಯ ಮೋರೆ ಮೇಲಿನ ಜನ ಎಲ್ಲಿಗೆ ತಾನೆ ಓಡಲಾದೀತು? ನಮ್ಮಲ್ಲಿ ಭೂಕಂಪ ಬಂದಾಗ ಮುಂಬಾಗಿಲ ಹೊಸ್ತಿಲ ಮೇಲೆ ನಿಲ್ಲುವುದೇ ಸುರಕ್ಷಿತ ಎಂಬ ಕನಿಷ್ಠ ರಕ್ಷಣಾ ತಂತ್ರವೂ ಎಷ್ಟೋ ಜನರಿಗೆ ಗೊತ್ತಿಲ್ಲ.
ಕಂಪನ ಇಂಥ ದಿನ, ಇಂಥ ವೇಳೆಗೇ ಆಗಲಿದೆ ಎಂಬ ಬಗ್ಗೆ ಈವರೆಗೆ ಭಾರತದ ಒಬ್ಬ ವಿಜ್ಞಾನಿಯೂ ಸೇರಿದಂತೆ ಇಬ್ಬರು ಮಾತ್ರ ಪಕ್ಕಾ ಮುನ್ನಾ ಮಾಹಿತಿ ಕೊಟ್ಟಿದ್ದಾರೆ. 1973ರಲ್ಲಿ ನ್ಯೂಯಾರ್ಕ್ನ ಬ್ಲೂ ಮೌಂಟೆನ್ ಸರೋವರದಲ್ಲಿ ಆದ ಭೂಕಂಪದ ಬಗ್ಗೆ ಭಾರತದ ವಿಜ್ಞಾನಿ ವೈ.ಪಿ.ಅಗರ್ವಾಲ್ ಖಚಿತ ಮುನ್ನಾ ಮಾಹಿತಿ ಕೊಟ್ಟಿದ್ದರು ಎಂದು ನೇಚರ್ ಪತ್ರಿಕೆಯ ಅದೇ ವರ್ಷದ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಚೀನಾದ ಹೀಚೆಂಗ್ನಲ್ಲಿ 1975ರಲ್ಲಿ ಭೂಕಂಪ ಆಗುತ್ತದೆ ಎಂದು ಅದೇ ದೇಶದ ಒಬ್ಬ ಭೂಗರ್ಭಶಾಸ್ತ್ರಜ್ಞ ಭವಿಷ್ಯ ನುಡಿದಿದ್ದರು. ಅದು ಅಕ್ಷರಶಃ ನಿಜವಾಯಿತು. ಅಷ್ಟೇ ಅಲ್ಲ, ಅವರ ಭವಿಷ್ಯ ವಾಣಿ 1ಲಕ್ಷಕ್ಕೂ ಹೆಚ್ಚು ಜನರ ಜೀವ ಉಳಿಸಿತು. ಆತನ ಮಾತನ್ನು ಚೀನಾ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು.
ವಸುಂಧರೆಯ ಗರ್ಭದ ಶಕ್ತಿಯ ಕುದಿ ಅತಿಯಾಗಿ ತನ್ನ ದೇಹವನ್ನೇ ಸೀಳಿಕೊಂಡು ಹೊರ ಸಿಡಿಯುವ ಕ್ರಿಯೆಯನ್ನು ‘ಸೀಳು ಸಿದ್ಧಾಂತ’ (ರಪ್ಚರ್ ಥಿಯರಿ) ದ ತಾಳೆ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ. ಒಮ್ಮೊಮ್ಮೆ ಈ ಭೂಗರ್ಭದ ಶಕ್ತಿಯ ಕುಣಿತ ವಿಜ್ಞಾನಿಗಳ ಮಿದುಳಿಗೂ ನಿಲುಕದ ವಿಷಯವಾಗಿ ಬಿಡುತ್ತದೆ. ಆದರೂ ಇಂಥ ಜಾಗದಲ್ಲಿ ಭೂಕಂಪ ಆಗುತ್ತದೆ ಎಂದು ನಿಖರವಾಗಿ ಹೇಳುವಷ್ಟರ ಮಟ್ಟಿಗೆ ವಿಜ್ಞಾನ ಮುಂದುವರೆದಿದೆ.
ಭಾರತದ ಮಟ್ಟಿಗೆ ಭೂಗರ್ಭ ವಿಜ್ಞಾನಿಗಳ ಸಂಶೋಧನೆಯದೂ ಆಮೆ ವೇಗ. ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳದು ಉಡಾಫೆ ಧೋರಣೆ. ಎಲ್ಲೋ ಕೆಲವು ಪುರ ಆಡಳಿತಗಳು ಮಾತ್ರ ಭೂಕಂಪದ ವೇಳೆ ಹಾನಿ ಮಾಡದಂಥ ಕಟ್ಟಡಗಳ ನಿರ್ಮಾಣವನ್ನು ಪರಿಶೀಲಿಸುತ್ತಿದ್ದಾರೆ ಎನ್ನುತ್ತಾರೆ ಐಐಟಿಯ ಪ್ರೊ. ದತ್ತ.
ಆದರೂ, ಮೊದಲು ಕೇಳಿದ ಪ್ರಶ್ನೆಗೆ ಪೂರ್ಣ ಪ್ರಮಾಣದ ವಿವರಣಾತ್ಮಕ ಉತ್ತರ ನಮ್ಮ ದೇಶದ ಯಾವ ವಿಜ್ಞಾನಿ ಬಳಿಯೂ ಇಲ್ಲ.
(ಐಎಎನ್ಎಸ್)