ಗುಜರಾತ್ ಪಟ್ಟಣ ದತ್ತು ಪಡೆಯಲು ರಾಜ್ಯದ ನಿರ್ಧಾರ
ಬೆಂಗಳೂರು : ಭೀಕರ ಭೂಕಂಪದಿಂದ ಬಹುತೇಕ ನೆಲಸಮವಾಗಿ ಹೋಗಿರುವ ಗುಜರಾತ್ನ ಪಾಟನ್ ಪಟ್ಟಣವನ್ನು ದತ್ತು ಪಡೆದು, ಪುನರ್ವಸತಿ ಕಲ್ಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ವಿಷಯವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಥೆರೇಸಾ ಭಟ್ಟಾಚಾರ್ಯ ಅವರು ಪ್ರಕಟಿಸಿದ್ದಾರೆಂದು ಕರ್ನಾಟಕ ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಭುಜ್, ಕಛ್ ಹಾಗೂ ಅಂಜಾರ್ಗಳಂತೆಯೇ ಪಾಟನ್ ಪಟ್ಟಣ ಕೂಡ ಸಂಪೂರ್ಣ ನಾಶವಾಗಿ ಹೋಗಿದೆ. ಶೇಕಡಾ 90ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ಈ ಪಟ್ಟಣವನ್ನು ದತ್ತು ಸ್ವೀಕರಿಸಿ ಪುನರ್ವಸತಿ ಕಲ್ಪಿಸಲು ಕರ್ನಾಟಕ ರಾಜ್ಯ ಸರಕಾರ ನಿರ್ಧರಿಸಿದ್ದು, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಗುಜರಾತ್ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಯಾವ ರೀತಿ ಪುನರ್ವಸತಿ ಕೈಗೊಳ್ಳಬೇಕೆಂಬುದನ್ನು ನಿರ್ಧರಿಸಲಿದ್ದಾರೆ.
ರಾಜ್ಯ ಸರಕಾರ ಗುಜರಾತ್ ಭೂಕಂಪಕ್ಕೆ ಪರಿಹಾರ ಘೋಷಿಸಿದೆ. ಒಂದು ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ನೆರವಿನ ಸಮರ್ಪಕ ಬಳಕೆ ಆಗಬೇಕು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಒರಿಸ್ಸಾಕ್ಕೂ ನೆರವು : ಚಂಡಮಾರುತದಿಂದ ತತ್ತರಿಸಿದ್ದ ಒರಿಸ್ಸಾ ರಾಜ್ಯದಲ್ಲಿ ಕೂಡ ಚಂಡಮಾರುತ ರಕ್ಷಣಾ ಕೊಠಡಿಗಳೂ ಸೇರಿದಂತೆ ನೂರು ಶಾಲೆಗಳನ್ನು ಕಟ್ಟಲು ರಾಜ್ಯ ಸರಕಾರ ನೆರವು ನೀಡುತ್ತಿದೆ ಎಂದೂ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.