ಸಿಂಧೂ ಕಣಿವೆ ನಾಗರಿಕತೆ ಹಾಳಾಗಲೂ ಭೂಕಂಪವೇ ಕಾರಣ
ಬೆಂಗಳೂರು : ಸಿಂಧೂ ಕಣಿವೆ (ಇಂಡಸ್ ವ್ಯಾಲಿ ಸಿವಿಲೈಸೇಷನ್) ನಾಗರಿಕತೆಯನ್ನು ಹಾಳು ಮಾಡಿದ್ದೂ ಭೂಕಂಪವೇ, ಸಿಂಧೂ ನದಿಯ ಮಾರ್ಗವನ್ನು ಬದಲಿಸಿದ್ದೂ ಭೂಕಂಪವೇ ಇರಬೇಕೆಂದು ಭಾಭಾ ಅಣುಶಕ್ತಿ ಕೇಂದ್ರದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ಗೆ ಭೂಕಂಪ ಹೊಸದೇನೂ ಅಲ್ಲ. ಈವರೆಗೆ ಅಲ್ಲಿ 257ಕ್ಕೂ ಹೆಚ್ಚು ಬಾರಿ ಭೂಕಂಪ ಸಂಭವಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜಮ್ಮು - ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ, ವನಾಂಚಲ, ಪೂರ್ವಾಂಚಲ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳನ್ನು ಸ್ಮೂಕ್ಷ ಪ್ರದೇಶಗಳೆಂದು ಗುರುತಿಸಲಾಗಿದ್ದು ಇಲ್ಲಿ ಭೂಕಂಪದ ಸಾಧ್ಯತೆಗಳು ಹೆಚ್ಚು ಎಂದೂ ಅವರು ಹೇಳಿದ್ದಾರೆ.
ಭಾರಿ ಭೂಕಂಪ ಸಂಭವಿಸಿದ ತರುವಾಯ ಲಘು ಭೂಕಂಪಗಳು ಘಟಿಸುವುದು ಸರ್ವೇಸಾಮಾನ್ಯ. ಹೀಗಾಗೇ ಗುಜರಾತ್ನಲ್ಲಿ ಶುಕ್ರವಾರದಿಂದೀಚೆಗೆ 100ಕ್ಕೂ ಹೆಚ್ಚು ಬಾರಿ ಭೂಕಂಪ ಆಗಿರುವುದು ಎಂಬುದು ಅವರುಗಳ ಅಭಿಪ್ರಾಯ. ರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಭೂಕಂಪ ಸಂಭವಿಸುತ್ತದೆ ಎಂದು ಪತ್ತೆ ಮಾಡಲಾಗಿದೆಯಾದರೂ, ಎಂದು ಅಲ್ಲಿ ಭೂಕಂಪ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲದ ಕಾರಣ ಆ ಪ್ರದೇಶಗಳ ಹೆಸರು ಬಹಿರಂಗಪಡಿಸುತ್ತಿಲ್ಲ ಎನ್ನುವ ಡೆಹ್ರಾಡೂನ್ ವಾಡಿಯಾ ಹಿಮಾಲಯ ಭೂ ವಿಜ್ಞಾನ ಸಂಸ್ಥೆ ತಜ್ಞರು. ಹಾಗೇನಾದರೂ ನಾವು ಊರುಗಳ ಹೆಸರು ಹೇಳಿದರೆ, ಜನ ಅನಗತ್ಯವಾಗಿ ಆತಂಕಕ್ಕೆ ಒಳಗಾಗುತ್ತಾರೆ ಎನ್ನುತ್ತಾರೆ.
ಜನವರಿ 26ರಂದು ಸಂಭವಿಸಿದ ಭೂಕಂಪಕ್ಕೆ ವಾರಗಳ ಮೊದಲೇ ಭೂಗರ್ಭದಲ್ಲಿ ಅನಿಲ ಬಿಡುಗಡೆಯಾಗಿತ್ತು ಎನ್ನುವ ವಿಜ್ಞಾನಿಗಳು ಜಿಪಿಎಸ್ ವ್ಯವಸ್ಥೆಯಿಂದ ಭೂಕಂಪದ ಮುನ್ಸೂಚನೆ ಪಡೆಯಲು ಸಾಧ್ಯ ಎಂದೂ ತಿಳಿಸಿದ್ದಾರೆ. ಭೂಗರ್ಭದೊಳಗೆ ನಡೆವ ಕ್ರಿಯೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಭೂಕಂಪದ ಬಗ್ಗೆ ನಿಖರ ಮಾಹಿತಿ ಕೊಡಲು ಸಾಧ್ಯ ಎಂದೂ ಅವರು ವಾದಿಸುತ್ತಾರೆ.