ಈಗಲೇ ಪ್ರಕೃತಿ ವಿಕೋಪ ಆಯೋಗ ರಚಿಸಿ : ದೇವೇಗೌಡ
ಬೆಂಗಳೂರು : ಗುಜರಾತ್ ಕಂಪನದಿಂದ ಸಂತ್ರಸ್ತರಾದವರಿಗೆ ಕ್ಷಿಪ್ರ ಪರಿಹಾರ ಒದಗಿಸುವಲ್ಲಿ ಸೂಕ್ತ ಸಂಯೋಜನೆಗೆ ತಕ್ಷಣವೇ ರಾಷ್ಟ್ರೀಯ ಪ್ರಕೃತಿ ವಿಕೋಪ ಆಯೋಗ ರಚಿಸುವಂತೆ ಪ್ರಧಾನಿ ಎ.ಬಿ.ವಾಜಪೇಯಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡ ಬುಧವಾರ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ದೇವೇಗೌಡ, ಇಂಥ ಬಿಕ್ಕಟ್ಟನ್ನು ಬಗೆಹರಿಸಲು ಪ್ರಕೃತಿ ವಿಕೋಪ ಆಯೋಗ ರಚಿಸಬೇಕೆಂದು ಒರಿಸ್ಸಾದಲ್ಲಿ ನೆರೆ ಬಂದಾಗಲೇ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೆ. ಆದರೆ ಸರ್ಕಾರ ನನ್ನ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಇವತ್ತಿಗೂ ಒರಿಸ್ಸಾದ ಎಷ್ಟೋ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ ಎಂದರು.
ದೆಹಲಿಯಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಿ, ಅಲ್ಲಿಂದ ಗುಜರಾತಿಗೆ ಅದು ತಲುಪೋ ಹೊತ್ತಿಗೆ ಇನ್ನೂ ಏನೆಲ್ಲಾ ಅನಾಹುತಗಳು ಆಗುತ್ತವೋ ? ಗೃಹ ಹಾಗೂ ಆರೋಗ್ಯ ಖಾತೆಗೆ ಸಂಬಂಧಪಟ್ಟ ಕೇಂದ್ರ ಸಚಿವರ ನಿಯೋಗವೊಂದು ಗುಜರಾತಿನಲ್ಲೇ ಬೀಡುಬಿಟ್ಟು, ಕ್ಷಿಪ್ರ ಪರಿಹಾರ ಕಾಮಗಾರಿಗೆ ಒತ್ತು ಕೊಡಬೇಕು ಎಂದು ದೇವೇಗೌಡ ಆಗ್ರಹಿಸಿದರು.
ನಮ್ಮ ದೇಶದ ಜನರನ್ನು ನಿರೀಕ್ಷೆಗೂ ಮೀರಿ ಭೂಕಂಪ ಬಲಿ ತೆಗೆದುಕೊಂಡಿದೆ. ಆಸ್ತಿ ಪಾಸ್ತಿ ಕಳಕೊಂಡ ಸಂತ್ರಸ್ತರು ಬೀದಿಯಲ್ಲಿ ನಿಂತಿದ್ದಾರೆ. ಪ್ರತಿಯಾಬ್ಬ ಭಾರತೀಯನೂ ಇವರ ನೆರವಿಗೆ ಕೈನೀಡಬೇಕು. ಬರುವ ಫೆಬ್ರವರಿ 3ರಿಂದ ಭೂಕಂಪ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಲಿದ್ದು, ಮುಖ್ಯ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಪರಿಹಾರಕ್ಕೆ ಜನರ ಸಹಾಯ ಬೇಡುತ್ತೇನೆ. ಸಂಗ್ರಹವಾಗುವ ಹಣವನ್ನು ಜಾತ್ಯತೀತ ಜನತಾದಳದ ಪರವಾಗಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಅಥವಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸುತ್ತೇನೆ ಎಂದು ದೇವೇಗೌಡ ಹೇಳಿದರು.
(ಯುಎನ್ಐ)
ಮುಖಪುಟ |