ಕೊಲೆ, ಸುಲಿಗೆ, ದರೋಡೆಗಳ ಊರು ನಿಮ್ಮ ಬೆಂಗಳೂರು
ನಮ್ಮ ವರದಿಗಾರರಿಂದ
ಬೆಂಗಳೂರು : ಅತ್ತ ವಸುಂಧರೆಯ ನಡುಕದಿಂದ ಕುಸಿದ ಕಟ್ಟಡಗಳ ಭಗ್ನಾವಶೇಷಗಳಡಿಯಿಂದ ಹೊರತೆಗೆಯಲಾಗುತ್ತಿರುವ ಶವಗಳನ್ನು ಕಿರುತೆರೆಯಲ್ಲಿ ನೋಡೆ ಭಯಭೀತರಾಗಿರುವ ಬೆಂಗಳೂರಿನ ಮಂದಿ ಈಗ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊಲೆ ಸುಲಿಗೆಗಳ ಸುದ್ದಿ ಕೇಳಿಯೇ ಸುಡುವ ಬಿಸಿಲಲ್ಲೂ ನಡುಗುತ್ತಿದ್ದಾರೆ. ಬೆಂಗಳೂರಿಗೆ ಏನಾಗಿದೆ ? ಕಾನೂನು ಸುವ್ಯವಸ್ಥೆ ನಿಜಕ್ಕೂ ಸರಿಯಾದ ದಾರಿಯಲ್ಲಿ ಸಾಗುತ್ತಿದೆಯೇ ? ಕೊಲೆ, ಸುಲಿಗೆ, ದರೋಡೆಗಳ ರಾಜಧಾನಿ ಆಗುತ್ತಿದೆಯೇ ?
ಇತ್ತೀಚಿನ ಒಂದೆರಡು ಉದಾಹರಣೆಗಳನ್ನು ಗಮನಿಸಿ :
- ಜನವರಿ 30ರ ಸೋಮವಾರ ಮಧ್ಯರಾತ್ರಿ ಪ್ಯಾಲೇಸ್ ಗುಟ್ಟಹಳ್ಳಿಯ ರಾಮಕೃಷ್ಣ ಎಂಬುವವರ ಕೊಲೆ ಯತ್ನ ನಡೆದಿದೆ. ವೈಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವರನ್ನು ಅಡ್ಡಗಟ್ಟಿದ ಮಂಜುನಾಥ, ಮುನಿರಾಜು, ಶೋಕಲ್ ರಾಜ್ ಎನ್ನುವವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ರಾಮಕೃಷ್ಣ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.
- ಜಯಮಹಲ್ನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯಾಬ್ಬರನ್ನು ದೋಚಿದ್ದಾರೆ. ಯುವಕನೊಬ್ಬ ಕುಡಿಯುವ ನೀರು ಕೇಳುವ ನೆಪದಲ್ಲಿ ಪಿಳ್ಳಣ್ಣ ಗಾರ್ಡನ್ನಲ್ಲಿ ಮನೆಯಾಡತಿಯ ಕಟ್ಟಿಹಾಕಿ ಚಿನ್ನಾಭರಣ ದೋಚಿದ್ದಾನೆ. ಅಶೋಕನಗರ ವ್ಯಾಪ್ತಿಯಲ್ಲಿ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಚಾಕು ತೋರಿಸಿ ನಗದು, ಮೊಬೈಲ್ ಫೋನ್ ಇತ್ಯಾದಿ ಲೂಟಿ ಮಾಡಿ ನಾಲ್ವರು ದುಷ್ಕರ್ಮಿಗಳು ಮಾರುತಿ ವ್ಯಾನ್ನಲ್ಲಿ ಪರಾರಿಯಾಗಿದ್ದಾರೆ.
- ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ತರಕಾರಿ ವ್ಯಾಪಾರಿಗಳನ್ನು ಅಡ್ಡಗಟ್ಟಿ, ಕಣ್ಣಿಗೆ ಮೆಣಸಿನಪುಡಿ ಎರಚಿ 1.50 ಲಕ್ಷ ರು. ನಗದು ದೋಚಲಾಗಿದೆ. ವೈಯಕ್ತಿಕ ದ್ವೇಶದಿಂದ ಮೊನ್ನೆಯಷ್ಟೇ ನಗರದಲ್ಲಿ ರೌಡಿಯಾಬ್ಬರ ಕೊಲೆಯೂ ಆಗಿತ್ತು. ರೌಡಿ ಹೆಸರು ಚೌಚೌ ರಾಜನ್.
ಮೂಡಲಪಾಳ್ಯದ ರಿಕ್ಷಾಚಾಲಕನೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಕಿಡಿಗೇಡಿಗಳು ರಿಕ್ಷಾವನ್ನೇ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಮಂಜುನಾಥರಾವ್ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಬ್ಯಾಟರಾಯನಪುರ ಪೊಲೀಸರು ಮೈಸೂರು ರಸ್ತೆ ಬಳಿ ಆಟೋ ಅಪಹರಿಸಿದ ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಗಿ ಪಹರೆ : ಬೆಂಗಳೂರಿನಲ್ಲಿ ನಡೆಯುತ್ತಿರುವ, ಕೊಲೆ, ಸುಲಿಗೆ, ರಸ್ತೆ ದರೋಡೆ, ಕಳ್ಳತನಗಳ ಲೆಕ್ಕ ಇಡುವುದೇ ಕಷ್ಟ ಎನ್ನುವ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತಂತೆ ಕಾಣುತ್ತಿದೆ. ಈಗ ಸೂರ್ಯ ಮುಳುಗುತ್ತಿದ್ದಂತೆಯೇ ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳ ಮೇಲೆ ತಡೆಯ ಕಟೆಕಟೆಗಳನ್ನು ಇಟ್ಟು, ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವವರನ್ನು ತಡೆದು ತಪಾಸಣೆ, ವಿಚಾರಣೆ ನಡೆಸಲಾಗುತ್ತಿದೆ.
ವಾಹನಗಳ ನೋಂದಣಿ ಸಂಖ್ಯೆಯನ್ನೂ ದಾಖಲಿಸಿಕೊಳ್ಳಲಾಗುತ್ತಿದೆ. ಈ ಕಾರ್ಯ ಬಹುತೇಕ ರಾಜ್ಕುಮಾರ್ ಅಪಹರಣವಾದ ದಿನದಿಂದಲೂ ನಡೆಯುತ್ತಿತ್ತು. ಆದರೆ, ಉದ್ಯಮಿಗಳ ಕೊಲೆ, ಹೆಚ್ಚುತ್ತಿರುವ ಸುಲಿಗೆಯ ಹಿನ್ನೆಲೆಯಲ್ಲಿ ಮತ್ತಷ್ಟು ಬಿಗಿಗೊಳಿಸಲಾಗಿದೆ. ಪೊಲೀಸರು ನಿದ್ದೆಗೆಟ್ಟು ಕೆಲಸ ಮಾಡುತ್ತಿದ್ದಾರೆ, ಅಪರಾಧಿಗಳು ಕೈಗೆ ಸಿಗಬೇಕು ಅಷ್ಟೇ.