ಗುಡುಗಿನ ಶಬ್ದವೂ ಭೂಕಂಪ ಎನಿಸೀತು
ಬೆಂಗಳೂರು : ಭುಜ್ನಲ್ಲಿ ಭೂತಾಯಿ ಮತ್ತೆ ಮತ್ತೆ ನಡುಗುತ್ತಲೇ ಇದ್ದಾಳೆ. ಬೆಂಗಳೂರೂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ವಸುಂಧರೆ ಸೋಮವಾರ ತಾನೂ ನಡುಗಿ, ಜನರನ್ನೂ ನಡುಗಿಸಿದಳು. ಕನಕಪುರ ಸಮೀಪದ ಹಾರೋಹಳ್ಳಿಯಲ್ಲಿ 200ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟವು. ಗುಜರಾತ್ ಭೂಕಂಪದ ಹಾನಿಯನ್ನು ಟಿ.ವಿಯಲ್ಲಿ ಕಂಡ ಜನರಿಗೆ ತಮ್ಮ ನೆಲವೇ ನಡುಗಿದಾಗ ಭೂಮಿಯೇ ಬಾಯ್ತೆರೆದಂತೆ ಅನ್ನಿಸಿತ್ತು.
ಆಕಾಶದಲ್ಲಿ ಗುಡುಗಿನ ಶಬ್ದ ಕೇಳಿದರೂ ಜನ ಹೆದರುವ ಸ್ಥಿತಿ. ಸಧ್ಯ ಈಗ ಮಳೆಗಾಲ ಅಲ್ಲ ಎಂಬುದು ಸಮಾಧಾನಕರ ಅಂಶ. ಅಂದಹಾಗೆ ರಾಜ್ಯದಲ್ಲಿ ಎಂದಿನಂತೆ ಒಣಹವೆ ಮುಂದುವರಿದಿದೆ. ರಾಜ್ಯದ ಅತಿ ಕನಿಷ್ಠ ಉಷ್ಣಾಂಶ 11.1ಡಿಗ್ರಿ ಸೆಲ್ಸಿಯಸ್ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಉತ್ತರ ಒಳನಾಡಿನ ಅನೇಕ ಕಡೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಬದಲಾವಣೆ ಕಂಡುಬಂದಿದೆ.
ಕೆಲವೆಡೆ ಕನಿಷ್ಠ ತಾಪಮಾನ ಅಧಿಕಗೊಂಡಿದ್ದರೆ, ಮತ್ತೆ ಕೆಲವಡೆ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಆಗಿತ್ತು. ದಕ್ಷಿಣ ಕರಾವಳಿಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಮುಂದಿನ 24 ಗಂಟೆಗಳ ಅವಧಿಯಲ್ಲೂ ರಾಜ್ಯದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳೇನೂ ಕಂಡುಬರುವುದಿಲ್ಲ.
ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ ಎಂದು ಬೆಂಗಳೂರಿನಲ್ಲಿರುವ ಹವಾಮಾನ ವೀಕ್ಷಣಾಲಯದ ವರದಿ ತಿಳಿಸಿದೆ.