ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಳಗೆ ಸಾವು, ಮೇಲೆ ಹುಟ್ಟುಹಬ್ಬ!

By Staff
|
Google Oneindia Kannada News

*ಟಿ.ಎಂ. ಸತೀಶ್‌

ಮಾಘ ಶುದ್ಧ ಸಪ್ತಮಿ (ಜನವರಿ 31) ರಥಸಪ್ತಮಿ. ಈ ದಿನ ಸೂರ್ಯನು ಉತ್ತರಾಣವನ್ನು ಪ್ರವೇಶಿಸುತ್ತಾನೆ. ಮಾಘ ಶುದ್ಧ ಸಪ್ತಮಿಯಂದೇ ಸೂರ್ಯ ಹುಟ್ಟಿದ್ದು ಎಂಬುದು ನಂಬಿಕೆ. ಅಂದ ಹಾಗೆ ಮೆನಿ ಮೆನಿ ಹ್ಯಾಪಿ ರಿಟರ್ನ್ಸ್‌ ಆಫ್‌ ದಿ ಡೇ ಸನ್‌ ಗಾಡ್‌.

ಭರತಖಂಡದಲ್ಲಿ ಈ ಹೊತ್ತು ಸಾವು ತನಗಿಷ್ಟಬಂದಂತೆ ನರ್ತಿಸುತ್ತಿದ್ದರೆ, ಸೂರ್ಯ ಮಹಾಶಯ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಳೆಯುತ್ತಿದ್ದಾನೆ. ಏನೀ ವಿಚಿತ್ರ !

ಈ ದಿನ ಕರ್ನಾಟಕದ ಹಲವು ಊರುಗಳಲ್ಲಿ (ಹೇಮಗಿರಿ, ಗೊರೂರು, ಶ್ರೀರಂಗಪಟ್ಟಣ)ರಥೋತ್ಸವ . ನವಗ್ರಹಗಳ ಪೂಜೆ, ಸೂರ್ಯ ದೇವನಿಗೆ ವಿಶೇಷ ಪೂಜೆಗಳೂ ನಡೆಯುತ್ತವೆ. ಮುಂಜಾನೆಯೇ ಎದ್ದು ಮನೆಯವರೆಲ್ಲಾ ಶಿರಸ್ಸಿನ ಮೇಲೆ, ಭುಜಗಳ ಮೇಲೆ ಒಟ್ಟು 7 ಎಕ್ಕದ ಎಲೆಗಳನ್ನು ಇಟ್ಟುಕೊಂಡು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಒಂದು ವರ್ಷದಲ್ಲಿ ಮಾಡಿದ ಎಲ್ಲ ಪಾಪಗಳೂ ಪರಿಹಾರವಾಗಿ ಸೂರ್ಯ ತೇಜಸ್ಸು ಪ್ರಾಪ್ತವಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ.

ಏಳು ಎಕ್ಕದೆಲೆ ಸ್ನಾನವೇಕೆ? : ಎಕ್ಕದೆಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡುವುದಕ್ಕೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳೂ ಇವೆ. ಏಳೇ ಎಕ್ಕದೆಲೆ ಏಕೆ ಇಟ್ಟುಕೊಳ್ಳಬೇಕು ಎಂಬುದಕ್ಕೂ ಹಿರಿಯರ ಬಳಿ ಉತ್ತರವಿದೆ. ರಥ ಸಪ್ತಮಿಯ ಅಚಾರ ವಿಚಾರಗಳ ಒಂದು ಅವಲೋಕನ ಇಲ್ಲಿದೆ.

ವಾರದಲ್ಲಿರುವುದು ಏಳು ದಿನ. ಹೀಗಾಗಿ ಸೂರ್ಯ ದೇವನ ಹ್ಯಾಪಿ ಬರ್ತ್‌ಡೇ ದಿನ. 7 ಎಕ್ಕದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡಬೇಕಂತೆ. ಸೂರ್ಯ ದೇವನು ಸಪ್ತಮಿಯ ದಿನ ಹುಟ್ಟಿರುವ ಕಾರಣ 7 ಎಕ್ಕದೆಲೆಗಳ ನಿಯಮ ಮಾಡಲಾಗಿದೆ. ಏಳು ಎಲೆಗಳ ವಿಷಯದಲ್ಲಿ ಮತ್ತೊಂದು ವಾದ ಹೀಗಿದೆ. ಮನುಷ್ಯ ಏಳು ಜನ್ಮ ಎತ್ತುತ್ತಾನಂತೆ. ರಥ ಸಪ್ತಮಿಯ ದಿನ ಪೂಜಾರ್ಹವಾದ 7 ಎಕ್ಕದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡುವುದರಿಂದ ಏಳೇಳು ಜನ್ಮಗಳ ಪಾಪಗಳೂ ಪರಿಹಾರವಾಗುತ್ತದಂತೆ.

ಆಯುರ್ವೇದ ಪಂಡಿತರ ಪ್ರಕಾರ ವೈಜ್ಞಾನಿಕ ಕಾರಣ : ಉತ್ತರಾಯಣ ಹುಟ್ಟಿ ಮಾಗಿಯ ಚಳಿ ಆರಂಭವಾಗುವುದೇ ಸಪ್ತಮಿಗೆ 7 ದಿನ ಮೊದಲು. ಈ ಮಾಗಿಯ ಚಳಿಗೆ ಮೈ - ಕೈ ಹೆಚ್ಚಾಗಿ ಒಡೆಯುವುದು. ಚರ್ಮದ ಮೇಲೆ ಮಾಗಿ ಚಳಿಯ ಪ್ರತಿಕೂಲ ಪರಿಣಾಮ ಆಗುತ್ತದಂತೆ. ಚರ್ಮ ರೋಗಕ್ಕೆ ಎಕ್ಕದ ಹಾಲನ್ನೂ ಔಷಧವಾಗಿ ಬಳಸಲಾಗುತ್ತದೆ. (ನಾವು ಚಿಕ್ಕವರಾಗಿದ್ದಾಗ ಕಾಲಿಗೆ ಮುಳ್ಳು ಚುಚ್ಚಿದರೆ, ಎಕ್ಕದ ಹಾಲು ಹಾಕುತ್ತಿದ್ದ ನೆನಪು) ಈ ಹಾಲಿನಲ್ಲಿ ಆ್ಯಂಟಿಬಯಾಟಿಕ್ಸ್‌ ಗುಣ ಇದೆ. ಈ ಹಾಲು ಕಣ್ಣಿಗೆ ಬಿದ್ದರೆ ಅಪಾಯ ತಪ್ಪಿದ್ದಲ್ಲ.

ಆದರೆ, ಚರ್ಮ ಸುಕ್ಕಾಗಿ, ಬಿರಿವ ಈ ಕಾಲದಲ್ಲಿ 30 ದಿನವೂ ಎಕ್ಕದ ಎಲೆಗಳಿಂದ ಮೈ ಉಜ್ಜಿಕೊಂಡು ಸ್ನಾನ ಮಾಡಿದರೆ, ಚರ್ಮ ರೋಗ ಬರುವುದಿಲ್ಲ, ಚರ್ಮ ಒಡೆಯುವುದಿಲ್ಲ. ಆದರೆ, ನಮ್ಮ ಹಿರಿಯರು ಆರೋಗ್ಯದ ದೃಷ್ಟಿಯಿಂದ ಈ ಕಾರ್ಯ ಮಾಡಿ ಎಂದರೆ ಮಾಡುತ್ತಿರಲಿಲ್ಲ. ಹೀಗಾಗಿ ರಥ ಸಪ್ತಮಿಯ ದಿನ ಈ ಶಾಸ್ತ್ರ ಮಾಡಲಾಗಿದೆ ಎಂಬುದು ಅಳಲೆಕಾಯಿ ಪಂಡಿತರೊಬ್ಬರ ಅಭಿಪ್ರಾಯ.

ಗೌತಮ ಸೂತ್ರ ಕ್ರಿಯಾ ಕಾಂಡದಲ್ಲಿ ಮನುಷ್ಯ ನಿತ್ಯ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ವಿವರಿಸಲಾಗಿದೆ. ಆ ಸಿದ್ಧಾಂತದ ಪ್ರಕಾರ ಇದು ಚಾಲ್ತಿಗೆ ಬಂದಿದೆ. ಇಂದು ಜನಪ್ರಿಯ ವಾಗುತ್ತಿರುವ ಮಡ್‌ ಬಾತ್‌ ಬಗ್ಗೆ ಕೂಡ ಹಿಂದೂಗಳಲ್ಲಿ ಬಹು ಹಿಂದೆಯೇ ತಿಳಿದಿತ್ತಂತೆ. ಹಿಂದೆ ಋಷಿ ಮುನಿಗಳು ತಮ್ಮ ಆರೋಗ್ಯ ರಕ್ಷಣೆಗೆ ಮೃತ್ತಿಕಾ ಸ್ನಾನವನ್ನು ಮಾಡುತ್ತಿದ್ದರಂತೆ.

ಆಚರಣೆ : ರಥ ಸಪ್ತಮಿಯ ದಿನ ಎಕ್ಕದೆಲೆಗಳ ಸ್ನಾನಾನಂತರ ಸೂರ್ಯ ದೇವನಿಗೆ ಅರ್ಘ್ಯ ನೀಡುತ್ತಾರೆ. ಮನೆಗಳಲ್ಲಿ ಮಣೆಗಳ ಮೇಲೆ ಒಂಟಿ ಚಕ್ರದ ರಥದ ಚಿತ್ರ ಬರೆದು ಸೂರ್ಯದೇವನನ್ನು ಪೂಜಿಸುತ್ತಾರೆ. ಹಬ್ಬ ಎಂದ ಮೇಲೆ ಪಾಯಸ, ಕೋಸುಂಬರಿ, ಎರಡು ಬಗೆ ಪಲ್ಯ ಇತ್ಯಾದಿ ಇತ್ಯಾದಿ ಇಲ್ಲದಿದ್ದರೆ ಆದೀತೆ?

ಕರ್ನಾಟಕದ ಕೆಲವಡೆ ಪವಿತ್ರ ನದಿಗಳಲ್ಲಿ ಅರುಣೋದಯ ಕಾಲದಲ್ಲಿ ಎಕ್ಕದೆಲೆ ಸ್ನಾನ ಮಾಡಿ. ತಲೆಯ ಮೇಲೆ ಚಿನ್ನ, ಬೆಳ್ಳಿ, ತಾಮ್ರದ ಪಾತ್ರೆಯಲ್ಲಿ ಪ್ರಕಾಶಿಸುವ ದೀಪವನ್ನು ಇಟ್ಟುಕೊಂಡು ಶಾಂತ ಮನಸ್ಸಿನಿಂದ ಪೂರ್ವ ದಿಕ್ಕಿಗೆ ತಿರುಗಿ ಭಕ್ತಿಯಿಂದ ಸೂರ್ಯನ ಧ್ಯಾನವನ್ನೂ ಮಾಡುವ ಆಚರಣೆ ಇದೆ.

ಒಟ್ಟಿನಲ್ಲಿ ಶೋಕ, ವ್ಯಾಧಿ ಉಪದ್ರವಗಳ ಪರಿಹಾರಕ್ಕಾಗಿ ರಥ ಸಪ್ತಮಿಯ ಸ್ನಾನಕ್ಕೆ ವಿಶೇಷ ಮಹತ್ವ ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X