ಜಪಾನ್ನಿಂದ 17 ವೈದ್ಯರು , 4 ಟನ್ ಔಷಧಿ ಹೊತ್ತು ತಂದ ವಿಮಾನ
ನವದೆಹಲಿ : ಗುಜರಾತ್ ಭೂಕಂಪ ಸಂತ್ರಸ್ತರಿಗೆ ನೆರವಾಗಲು 17 ವೈದ್ಯಕೀಯ ಪರಿಣತರು ಹಾಗೂ 4 ಟನ್ ಔಷಧ ಸಾಮಗ್ರಿಗಳನ್ನು ಹೊತ್ತು ವಿಶೇಷ ವಿಮಾನವೊಂದು ಮಂಗಳವಾರ ನವದೆಹಲಿಗೆ ಆಗಮಿಸಿದೆ. ರಾತ್ರಿಯ ವೇಳೆಗೆ ಈ ಎಲ್ಲ ಸಾಮಗ್ರಿಗಳು ಹಾಗೂ ವೈದ್ಯರ ತಂಡ ಅಹಮದಾಬಾದ್ ತಲುಪಲಿದೆ.
ಪಾಕಿಸ್ತಾನ ಒಂದು ವಿಮಾನದ ತುಂಬಾ ಟೆಂಟ್ ಸಾಮಗ್ರಿಗಳು ಹಾಗೂ ಕಂಬಳಿಗಳನ್ನು ಗುಜರಾತ್ ಸಂತ್ರಸ್ತರಿಗಾಗಿ ಕಳುಹಿಸಿದೆ . ಫ್ರಾನ್ಸ್ ಸರಕಾರ 1 ಮಿಲಿಯನ್ ಫ್ರಾಂಕ್ಗಳ ನೆರವು ನೀಡಿದೆ. ಆಸ್ಟ್ರೇಲಿಯಾ ಸರಕಾರ 1.5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ನೆರವು ನೀಡುವುದಾಗಿ ಸೋಮವಾರ ಘೋಷಿಸಿದೆ.
ಜಗತ್ತಿನ ಮೂಲೆಮೂಲೆಗಳಿಂದ ನೆರವು ಹರಿದುಬರುತ್ತಿರುವ ವರ್ತಮಾನ ನಿತ್ಯ ಬರುತ್ತಿದೆ. ಅದೇ ವೇಳೆಗೆ ಬ್ಯಾಂಡೇಜ್ ಬಟ್ಟೆಗೂ ಕೊರತೆ ಎನ್ನುವ ಹಾಹಾಕಾರ ಭೂಕಂಪ ಪೀಡಿತ ಪ್ರದೇಶಗಳಿಂದ ಕೇಳಿ ಬರುತ್ತಿದೆ. ಅಂದರೆ ನೆರವು ಮತ್ತು ಪೂರೈಕೆಯ ನಡುವೆ ಒಂದು ದೊಡ್ಡ ಕಂದಕ ಇದೆ ಎಂದಾಯಿತು. ಈ ಕಂದಕ ಶೀಘ್ರ ಮುಚ್ಚಿಕೊಂಡರೆ ಸಾರ್ಥಕ.
ಜನರ ಗುಳೆ : ಭೂಕಂಪದಲ್ಲಿ ಮನೆ ಮಠ, ಬಂಧು ಬಾಂಧವರನ್ನು ಕಳೆದುಕೊಂಡು ಬದುಕುಳಿದ ನೂರಾರು ಮಂದಿ ಶವಗಳು ಕೊಳೆತು ನಾರುತ್ತಿರುವ ಕಾರಣ ಸಾಂಕ್ರಾಮಿಕ ರೋಗ ಹಬ್ಬಬಹುದೆಂಬ ಭೀತಿಯಿಂದ ಕುಂಟುತ್ತಾ, ತೆವಳುತ್ತಾ ಪುನರ್ವಸತಿ ಕೇಂದ್ರಗಳನ್ನು ತೊರೆದು ಗುಳೆ ಹೋಗುತ್ತಿದ್ದಾರೆ.
ಭುಜ್, ಕಛ್ ಹಾಗೂ ಗಾಂಧಿಧಾಮ್ ಪ್ರದೇಶದಲ್ಲಿ ಕೊಳೆತ ಶವಗಳ ದುರ್ನಾತ ಮೈಲಿಗಟ್ಟಲೆ ದೂರಕ್ಕೂ ಹಬ್ಬಿದೆ. ಊರಿಗೆ ಊರೆ ಸ್ಮಶಾನವಾಗಿದೆ. ಕುಸಿದ ಕಟ್ಟಡಗಳ ಭಗ್ನಾವಶೇಷಗಳನ್ನು ತೆಗೆಯುವ ಕಾಯಕದಲ್ಲಿ ಸೇನೆ, ಸ್ವಯಂ ಸೇವಕರು ಹಾಗೂ ಜೆ.ಸಿ.ಬಿ, ಕ್ರೇನ್ ಇತ್ಯಾದಿ ಉಪಕರಣಗಳು ಕಾರ್ಯ ನಿರ್ವಹಿಸುತ್ತಿವೆಯಾದರೂ ಶೇ.90ರಷ್ಟು ಮನೆಗಳು ಕುಸಿದಿರುವ ಕಾರಣ ಈ ಉಪಕರಣಗಳು ಏನೇನೂ ಸಾಲದಾಗಿವೆ.
ಹತ್ತು ಕನ್ನಡ ಕುಟುಂಬ: ಈ ಮಧ್ಯೆ ಭುಜ್ನಲ್ಲಿ ಹತ್ತಕ್ಕೂ ಹೆಚ್ಚು ಕನ್ನಡಿಗರ ಕುಟುಂಬ ಇತ್ತು ಎಂಬ ವರ್ತಮಾನ ಬಂದಿದ್ದು, ಇವರುಗಳ ಪೈಕಿ ಬ್ಯಾಂಕ್ ಅಧಿಕಾರಿಯಾಬ್ಬರು ಮಾತ್ರ ತಮ್ಮ ಬದುಕುಳಿದ ಕುಟುಂಬದ ಸದಸ್ಯರೊಂದಿಗೆ ಬೆಂಗಳೂರಿನತ್ತ ಹೊರಟಿದ್ದಾರೆ ಎನ್ನಲಾಗಿದೆ. ಉಳಿದವರ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.