ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಭತ್ತು ಗಂಟೆ ನಂತರ ಬೆಳಕು ಕಂಡ ಹಾಲು ಕುಡಿವ ಹಸುಳೆ

By Staff
|
Google Oneindia Kannada News

ಭುಜ್‌ : ಸಿಮೆಂಟು, ಇಟ್ಟಿಗೆ, ಕಲ್ಲುಗಳ ಎಡೆಯಲ್ಲಿ ಸಿಕ್ಕಿಕೊಂಡ, 80 ಗಂಟೆಗಳ ಕಾಲ ನಲುಗುತ್ತಾ ಉಸಿರು ಕಾಯ್ದಿಟ್ಟು ಕೊಂಡ ಎಂಟು ತಿಂಗಳ ಪುಟಾಣಿ ಕೂಸು ಮಂಗಳವಾರ ಬೆಳಿಗ್ಗೆ ಸೂರ್ಯನ ಬೆಳಕು ಕಂಡಿತು.

ಭೂಕಂಪದ ಕರಾಳ ಬಾಹುಗಳಲ್ಲಿ ಹಿಸುಕಿ ಹೋದ ಅಪ್ಪ ಅಮ್ಮನ ಥಂಡಿ ಮಡಿಲಲ್ಲಿ ಹೊಸಹುಟ್ಟು ಕಂಡ ಕಂದ ಉಸಿರಾಡುತ್ತಿತ್ತು. ಬೆಚ್ಚನೆಯ ಬೆಡ್‌ ಮೇಲೆ, ತೊಟ್ಟಿಲ ಪಕ್ಕ ಅಮ್ಮನ ಮಡಿಲಲ್ಲಿ ಹಾಲು ಕುಡಿಯುತ್ತಿದ್ದ ಕಂದನ ಮೇಲೆ ಸಾಲು ಸಾಲು ಬಿಲ್ಡಿಂಗ್‌ಗಳು ಒಮ್ಮೆಗೇ ಕುಸಿದಿದ್ದವು. ಅಮ್ಮ ಅಪ್ಪ ಇಬ್ಬರನ್ನೂ ಭೂಕಂಪ ಕಿತ್ತು ಕೊಂಡು ಹೋಗಿದೆ. ಮಗುವೀಗ ತಬ್ಬಲಿ.

ಮಗುವಿನ ಸುಳಿವು ಸಿಕ್ಕ ಬಗೆ : ರಾಶಿ ಮಣ್ಣಿನಡಿಯಿಂದ ಬೆಕ್ಕೊಂದು ಕ್ಷೀಣವಾಗಿ ಕೂಗುವ ಸದ್ದು ಕೇಳಿಸುತ್ತಿತ್ತು. ಅವಸರವಸರವಾಗಿ ಅಗೆದು ನೋಡಿದಾಗ, ಮಗುವೊಂದು ಅಪ್ಪ, ಅಮ್ಮನ ಮಡಿಲೆಡೆಯಲ್ಲಿ ಹುದುಗಿ ಹೋಗಿತ್ತು. ಅಪ್ಪ ಅಮ್ಮ ಇಬ್ಬರ ಶವಗಳನ್ನೂ ಹೊರ ತೆಗೆದು, ಮಗುವನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಬಿಎಸ್‌ಎಫ್‌ನ ಡೆಪ್ಯೂಟಿ ಕಮಾಂಡರ್‌ ದಿವಾಕರ್‌ ಕುಮಾರ್‌ ಹೇಳುತ್ತಾರೆ. ಭೂಕಂಪವಾಗಿ ಆಗಲೇ 80 ಗಂಟೆ ಕಳೆದಿದೆ. ಮಗು ಬದುಕಿರುವುದು ಪವಾಡವೇ ಸರಿ ಎನ್ನುತ್ತಾರೆ ಅಧಿಕಾರಿಗಳು.

ಭೂಕಂಪವಾಗುತ್ತಿರುವಾಗ ಹಸುಳೆಗೆ ಅಮ್ಮ ಹಾಲೂಡಿಸುತ್ತಿರಬೇಕು. ಕಟ್ಟಡ ಬಿದ್ದಿರುವುದರಿಂದ ಆಕೆಯ ದೇಹ ನಜ್ಜುಗುಜ್ಜಾಗಿದೆ. ರಕ್ತ ಹರಿಯುತ್ತಿದ್ದುದರಿಂದ ಮಗುವಿಗೆ ಇನ್‌ಫೆಕ್ಷನ್‌ ಆಗಿರುವ ಸಾಧ್ಯತೆ ಇದೆ. ಯಾಕೆಂದರೆ ಮಗುವಿಗೆ ಯಾವುದೇ ಗಾಯಗಳಾಗದಿದ್ದರೂ, ಬಾಯಿಯ ತುಂಬಾ ರಕ್ತ ಇತ್ತು ಎಂದು ಡಾಕ್ಟರ್‌ ಹೇಳುತ್ತಾರೆ.

ಮಗುವಿನ ಪಾಲಿಗೀಗ ಉಳಿದಿರುವುದು ಅಜ್ಜ ಮೊಯಿಜ್‌ ಜಮಾಲಿ.

ಸೋಮವಾರ ಬೆಳಗ್ಗಿನಿಂದ ಸೈನಿಕರು ಅನೇಕ ಪುಟ್ಟ ಕಂದಮ್ಮಗಳನ್ನು ರಕ್ಷಿಸಿರುವ ವರದಿಗಳು ಬರುತ್ತಿವೆ. ಸಂಪೂರ್ಣ ನಾಶವಾಗಿರುವ ವೊಂದ್‌ ಮತ್ತು ಬಚಾವ್‌ ಜಿಲ್ಲೆಗಳಲ್ಲಿ ಇಬ್ಬರು ಹಸುಳೆಗಳನ್ನು ಪಾರು ಮಾಡಲಾಗಿದೆ. ಅಹಮದಾಬಾದ್‌ನಲ್ಲಿ ಒಬ್ಬ ಅಜ್ಜಿ ಕುಸಿದ ಕಟ್ಟಡಗಳಡಿಯಿಂದ ಉಸಿರು ಸಮೇತ ಆಚೆಗೆ ಬಂದಿದ್ದಾಳೆ.

(ಇನ್ಫೋ ವಾರ್ತೆ)

ಮುಖಪುಟ / ಗುಜರಾತ್‌ ಭೂಕಂಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X