ಭಾರತದ ಮನವಿಗೆ ಓಗೊಟ್ಟ ವಿಶ್ವಬ್ಯಾಂಕ್, ತಿಂಗಳೊಳಗೆ ನೆರವು
ವಾಷಿಂಗ್ಟನ್ : ಗುಜರಾತ್ ಭೂಕಂಪ ಪರಿಹಾರಕ್ಕೆ ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಇನ್ನೊಂದೇ ತಿಂಗಳ ಅವಧಿಯಲ್ಲಿ ಮುಗಿಸುವುದಾಗಿ ವಿಶ್ವ ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ವಿತ್ತ ಮಂತ್ರಿ ಯಶವಂತ ಸಿನ್ಹಾ ಅವರು ಗುಜರಾತ್ನಲ್ಲಿನ ಪರಿಹಾರ ಕಾರ್ಯಕ್ಕಾಗಿ ಒಂದು ಮಿಲಿಯನ್ಡಾಲರ್ ಹಣದ ನೆರವನ್ನು ಒದಗಿಸುವಂತೆ ವಿಶ್ವ ಬ್ಯಾಂಕ್ಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ನೆರವು ಕೋರಿರುವ ಅರ್ಜಿ, ಬ್ಯಾಂಕ್ನ ಮುಖ್ಯ ಕಚೇರಿಗೆ ತಲುಪಿದ ತಕ್ಷಣ ವಿಶ್ವ ಬ್ಯಾಂಕ್ ಅಧಿಕಾರಿಗಳ ತಂಡ ಭೂಕಂಪ ಪೀಡಿತ ರಾಜ್ಯಕ್ಕೆ ಭೇಟಿ ನೀಡಿ, ಅಲ್ಲಿನ ಸ್ಥಿತಿ ಗತಿಯನ್ನು ಪರಿಶೀಲಿಸಿ ಸಲ್ಲಿಸಲಾಗುವ ವರದಿಯ ಆಧಾರದ ಮೇಲೆ ನೆರವಿನ ಹಣ ಬಿಡುಗಡೆಯಾಗಲಿದೆ.
ಇತ್ತೀಚೆಗಷ್ಟೆ ಟರ್ಕಿಯಲ್ಲಿ ನಡೆದ ಭೂಕಂಪ ಪರಿಹಾರಕ್ಕೆ ಬ್ಯಾಂಕ್ ತಕ್ಷಣವೇ ಹಣ ಬಿಡುಗಡೆ ಮಾಡಿರುವುದನ್ನು ಸ್ಮರಿಸಿಕೊಂಡ ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಬ್ಯಾಂಕ್ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಹೇಳಿದರು.
ವಸತಿ, ರಸ್ತೆ, ವಿದ್ಯುತ್ಜಾಲ ಮತ್ತಿತರ ಮೂಲಭೂತ ಸೌಕರ್ಯ ಕ್ಷೇತ್ರಗಳಿಗಾಗಿ ಬ್ಯಾಂಕ್ ನೆರವು ನೀಡಲಿದೆ. ಕಳೆದ ವರ್ಷವಷ್ಟೇ ಒರಿಸ್ಸಾ ಚಂಡ ಮಾರುತ ಪರಿಹಾರಕ್ಕೆ ಒರಿಸ್ಸಾ ಸರಕಾರ 300 ಮಿಲಿಯನ್ ಡಾಲರ್ ನೆರವು ಕೋರಿದ್ದು , ವಿಶ್ವಬ್ಯಾಂಕ್ ತಂಡ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ 150 ಮಿಲಿಯನ್ ಡಾಲರ್ ನೆರವು ಬಿಡುಗಡೆ ಮಾಡಿದೆ.
(ಯುಎನ್ಐ)